ಬಂಟ್ವಾಳ, ಮಾರ್ಚ್ 04, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಬೈಪಾಸ್ ಮಾಂಡೋವಿ ಶೋರೂಂ ಬಳಿ ಫೆಬ್ರವರಿ 26 ರಂದು ರಾತ್ರಿ ನಡದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರಿಕೊಂಬು ಗ್ರಾಮದ ನೆಹರುನಗರ ಸಮೀಪದ ಪಿತ್ತಿಲಗುಡ್ಡೆ ನಿವಾಸಿ ಮೊಹಮ್ಮದ್ ರಾಝೀಕ್ (22) ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಅಪಘಾತದ ಇತರ ಇಬ್ಬರು ಗಾಯಾಳುಗಳಾದ ಶಾಕಿರ್ ಹಾಗೂ ನಾಝೀಂ ಅವರು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಕಳೆದ ಶನಿವಾರ ರಾತ್ರಿ ಸುಮಾರು 9.30ರ ವೇಳೆಗೆ ಶಾಕಿರ್ ಅವರು ಪಾಣೆಮಂಗಳೂರು ಮಾಂಡೊವಿ ಶೋ ರೂಂ ಸಮೀಪದ ಎಸ್ ಆರ್ ಬೇಕರಿಗೆ ಕೋಳಿ ಮಾಂಸ ಕೊಟ್ಟು ಅಲ್ಲಿಂದ ವಾಪಾಸು ಅಂಗಡಿಗೆ ಬರಲು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿ ತಲುಪಿದಾಗ ಹಿಂದಿನಿಂದ ಅಂದರೆ ಮೆಲ್ಕಾರ್ ಕಡೆಯಿಂದ ಧಾವಿಸಿ ಬಂದ ಸ್ಕೂಟರ್ ಚಾಲಕನ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿದ್ದ ಶಾಕಿರ್ ಅವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಪಾದಚಾರಿ ಶಾಕೀರ್ ಹಾಗೂ ಸ್ಕೂಟರ್ ಸವಾರ ನಾಝೀಮ್, ಸಹಸವಾರ ಮೊಹಮ್ಮದ್ ರಾಝೀಕ್ ಮೂರೂ ಮಂದಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದರು.
ಗಾಯಗೊಂಡ ಪಾದಚಾರಿ ಶಾಕೀರ್ ಹಾಗೂ ಸ್ಕೂಟರ್ ಸವಾರ ನಾಝೀಮ್ ಅವರನ್ನು ಮಂಗಳೂರು-ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ದಾಖಲಿಸಲಾಗಿದ್ದರೆ, ಸಹಸವಾರ ಮೊಹಮ್ಮದ್ ರಾಝೀಕ್ ಅವರನ್ನು ಒಳರೋಗಿಯಾಗಿ ದಾಖಲಿಸಲಾಗಿತ್ತು.
ಇದೀಗ ಚಿಕಿತ್ಸೆ ಫಲಕಾರಿಯಾಗದೆ ರಾಝೀಕ್ ನಿಧನರಾಗಿದ್ದಾರೆ. ಮೃತ ರಾಝಿಕ್ ಅವಿವಾಹಿತನಾಗಿದ್ದು, ಕುಟುಂಬಕ್ಕೆ ಏಕಮಾತ್ರ ಆಧಾರಸ್ಥಂಭವಾಗಿದ್ದ. ಅತ್ಯಂತ ಬಡತನದಲ್ಲೂ ಕುಟುಂಬವನ್ನು ಸಾಕುತ್ತಿದ್ದ. ಏಕಮಾತ್ರ ಕಿರಿ ಸಹೋದರ ಇನ್ನೂ ವಿದ್ಯಾರ್ಥಿಯಾಗಿದ್ದಾನೆ. ಮೃತ ರಾಝಿಕ್ ಹೆತ್ತವರು, ಮೂರು ಮಂದಿ ಸಹೋದರಿಯರು, ಓರ್ವ ಸಹೋದರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.
0 comments:
Post a Comment