ಬಂಟ್ವಾಳ, ಜುಲೈ 22, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಬಿಸಿಎಂ ಹಾಸ್ಟೆಲಿನಲ್ಲಿ ವಾಸವಾಗಿರುವ 14 ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಶರತ್ ಎಸ್, ಅಭಿಷೇಕ್, ಸುದೀಪ್ ರಾಕೇಶ್ ಹಾಗೂ ಸಂಗಡಿಗರು ಸೇರಿಕೊಂಡು ಬೆಲ್ಟ್, ವಿಕೆಟ್ಗಳಿಂದ ಹಲ್ಲೆ ಮಾಡಿದ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಗುರುವಾರ (ಜುಲೈ 20) ರಾತ್ರಿ 9.30 ರಿಂದ 11.30 ರ ಮಧ್ಯೆ ಇರುವ ಅವಧಿಯಲ್ಲಿ ಈ ಹಲ್ಲೆ ಘಟನೆ ನಡೆದಿದ್ದು, ಹಾಸ್ಟೆಲಿನಲ್ಲಿ ವಾಸ್ತವ್ಯ ಇರುವ ಪ್ರಥಮ ಪಿಯುಸಿಯ 14 ವಿದ್ಯಾರ್ಥಿಗಳಿಗೆ ಆರೋಪಿತ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಲ್ಲದೆ ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಮತ್ತೆ ಹಲ್ಲೆ ನಡೆಸುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ.
ಹಲ್ಲೆಯಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಯ ಬಗ್ಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಈ ಬಗ್ಗೆ ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಚ್ ಜಿ ಅವರು ಗುರುವಾರ ಮಧ್ಯಾಹ್ನ ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ 143, 148, 324, 506 ಜೊತೆಗೆ 149 ಐಪಿಸಿ ಜೊತೆಗೆ ಮತ್ತು 116 ಕರ್ನಾಟಕ ಎಜುಕೇಷನ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment