ಬಂಟ್ವಾಳ, ಆಗಸ್ಟ್ 24, 2023 (ಕರಾವಳಿ ಟೈಮ್ಸ್) : ತಾಲೂಕು ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಹರುನಗರ ಸಮೀಪದ ಜನತಾಗೃಹ ವೀರಮಾರುತಿ ವ್ಯಾಯಾಮ ಶಾಲಾ ಬಳಿ ಇರುವ ವೀರಮಾರುತಿ ಅಂಗನವಾಡಿ ಕೇಂದ್ರದ ಕಟ್ಟಡ ಇನ್ನೇನು ಕುಸಿತ ಭೀತಿ ಎದುರಿಸುತ್ತಿದ್ದು, ಕೇಂದ್ರಕ್ಕೆ ಬರುವ ಪುಟಾಣಿ ಮಕ್ಕಳ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಸುಮಾರು 35 ವರ್ಷಗಳ ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರದಲ್ಲಿ ಎ ರುಕ್ಮಯ್ಯ ಪೂಜಾರಿ ಶಾಸಕರಾಗಿರುವ ಅವಧಿಯಲ್ಲಿ ನಿರ್ಮಾಣಗೊಂಡ ಇಲ್ಲಿನ ಅಂಗನವಾಡಿ ಕೇಂದ್ರ ಇದುವರೆಗೂ ನಡೆದುಕೊಂಡು ಬರುತ್ತಿದ್ದು, ಇದೀಗ ಕಳೆದ ಕೆಲ ವರ್ಷಗಳಿಂದ ಈ ಅಂಗನವಾಡಿ ಕಟ್ಟಡದ ಗೋಡೆ-ಮಾಡುಗಳು ಶಿಥಿಲಾವಸ್ಥೆಗೆ ಬಂದಿದ್ದು, ಜೋರಾಗಿ ಗಾಳಿ ಬೀಸಿದರೆ, ಮಳೆ ಬಂದರೆ ಯಾವುದೇ ಸಂದರ್ಭದಲ್ಲೂ ಕುಸಿತದ ಭೀತಿ ಎದುರಾಗಿದೆ. ಅಂಗನವಾಡಿ ಕಟ್ಟಡದ ಮಾಡಿಗೆ ಮಳೆ ನೀರು ಸೋರಿಕೆ ತಡೆಗಟ್ಟಲು ಟರ್ಪಾಲು ಅಳವಡಿಸಲಾಗಿದ್ದು, ಅದೂ ಕೂಡಾ ಜೋರು ಗಾಳಿಗೆ ಹಾರಿ ಬಂದು ಕೆಳಕ್ಕೆ ಜಾರಿದೆ. ಮೇಲ್ಛಾವಣಿಗೆ ಅಳವಡಿಸಲಾಗಿರುವ ಶೀಟುಗಳು ಕೂಡಾ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡದ ಒಳಭಾಗದಲ್ಲೂ ಮಾಡುಗಳು, ಗೋಡೆಗಳು ಬಿರುಕು ಬಿಟ್ಟಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಅಲ್ಲದೆ ಕಟ್ಟದ ಹಿಂಭಾಗದ ಬದಿಯ ಧರೆ ಕೂಡಾ ಕುಸಿಯುತ್ತಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಅಂಗನವಾಡಿ ಕುಸಿತದ ಭೀತಿ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ ಸದಸ್ಯ ಪ್ರಕಾಶ್ ಕೋಡಿಮಜಲು ಅವರು ಶಾಸಕರಿಗೆ, ಪಂಚಾಯತ್ ಅಧ್ಯಕ್ಷರು, ಪಿಡಿಒ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಂಚಾಯತ್ ಸದಸ್ಯರ ಮನವಿಗೆ ಸ್ಪಂದಿಸಿರುವ ನೂತನ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಅವರು ಕೂಡಾ ಸ್ಪಂದಿಸಿದ್ದು, ಪಂಚಾಯತಿನ ನರೇಗಾ ಯೋಜನೆಯಡಿ 5 ಲಕ್ಷ ಮಂಜೂರು ಮಾಡುವ ಅವಕಾಶ ಇದ್ದು, ಈ ಬಗ್ಗೆ ತಾ ಪಂ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಮತ್ತಷ್ಟು ಅನುದಾನಕ್ಕೆ ಅವಕಾಶ ಕೇಳುವಂತೆ ತಿಳಿಸಿದ್ದಾರೆ.
ಈ ನಡುವೆ ಸ್ಥಳೀಯ ಶಾಸಕರು ಹಾಗೂ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖಾಧಿಕಾರಿಗಳು ಕೂಡಾ ಇಲ್ಲಿನ ಅಂಗನವಾಡಿ ಕೇಂದ್ರದ ನಾದುರಸ್ತಿಗೆ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪುಟಾಣಿ ಮಕ್ಕಳ ಹಿತದೃಷ್ಟಿಯಿಂದ ತುರ್ತು ಪರಿಹಾರ ಒದಗಿಸಬೇಕು ಹಾಗೂ ಸ್ಥಳೀಯ ಸ್ಥಿತಿವಂತರು ಕೂಡಾ ಅಂಗನವಾಡಿ ಕೇಂದ್ರಕ್ಕೆ ಆರ್ಥಿಕ ಸಹಕಾರ ಒದಗಿಸಿ ಗ್ರಾಮದ ಅಂಗನವಡಿ ಕೇಂದ್ರದ ಅಭಿವೃದ್ದಿ ನಿಟ್ಟಿನಲ್ಲಿ ಸಹಕರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment