ಸಾಮಾನ್ಯ ಜನರನ್ನೂ ನಿರ್ಲಕ್ಷತಾಭಾವದಿಂದ ಕಾಣದಿರಿ, ಜನಸ್ನೇಹಿಯಾಗಿ ಕೆಲಸ ಮಾಡಿ : ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಉಸ್ತುವಾರಿ ಸಚಿವರು
ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ
ಬಂಟ್ವಾಳ, ಫೆಬ್ರವರಿ 05, 2025 (ಕರಾವಳಿ ಟೈಮ್ಸ್) : ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಲಾಗಿರುವ ಎಲ್ಲಾ ಭರವಸೆಗಳನ್ನೂ ಅತ್ಯಂತ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಮತ್ತು ರಾಜ್ಯ ಕುಟುಂಬ ಕಲ್ಯಾಣ ಹಾಗೂ ದ ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಿ ಸಿ ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದು ಕೊರತೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದರೆ ಜನರಿಗೆ ಉತ್ತಮ ಸ್ಪಂದನೆ ಸಿಗುತ್ತದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಇದ್ದಾಗ ಜನರ ಸಮಸ್ಯೆಗಳಿಗೆ ಪರಿಹಾರ ವಿಳಂಬವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಜನರೊಂದಿಗೆ ಅತ್ಯುತ್ತಮ ಸ್ಪಂದನಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಅಭಿವೃದ್ದಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜನತಾ ದರ್ಶನ ಮೂಲಕ ಗರಿಷ್ಠ ಸಮಸ್ಯೆಗಳಿಗೆ ಪರಿಹಾರದ ಪ್ರಯತ್ನ ಮಾಡಲಾಗುತ್ತದೆ ಎಂದ ಗುಂಡೂರಾವ್ ಸರಕಾರ ಇರುವುದು ಜನರ ಸೇವೆಗಾಗಿ. ಜನರ ಮಾತನ್ನು ಕೇಳಿ ಸರಕಾರ ತೀರ್ಮಾನ ಮಾಡುತ್ತದೆ. ಈ ದಿನ 177 ಮಂದಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರಲ್ಲದೆ ಸಾಮಾನ್ಯ ಜನರೊಂದಿಗೆ ಅಧಿಕಾರಿಗಳು ದರ್ಪದಿಂದ ವರ್ತಿಸದೆ ಸೌಜನ್ಯದಿಂದ ವರ್ತಿಸಿ ಸ್ಪಂದಿಸಿ ಗೌರವದಿಂದ ನೋಡಿಕೊಳ್ಳಬೇಕು. ಅಂಗನವಾಡಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನರ ಜೊತೆ ಉತ್ತಮವಾಗಿ ವರ್ತಿಸಿ. ಯಾವುದೇ ಸಾಮಾನ್ಯ ಜನರನ್ನೂ ನಿರ್ಲಕ್ಷತಾ ಭಾವದಿಂದ ಕಾಣದಿರಿ. ಜನಸ್ನೇಹಿ ಆಡಳಿತ ನೀಡಿ. ಆದ್ಯತೆ ಮೇರೆಗೆ ಸಾಮಾನ್ಯ ಜನರ ಕೆಲಸ ನಿರ್ವಹಿಸಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಮಾತನಾಡಿ, ಅಧಿಕಾರಿಗಳು ಜನರೊಂದಿಗೆ ಸ್ಪಂದನಾ ಮನೋಭಾವದಿಂದ ಕೆಲಸ ಮಾಡಿ ಎಂಬ ಉಸ್ತುವಾರಿ ಸಚಿವರ ಮಾತಿಗೆ ಅಡಿಗೆರೆ ಎಳೆಯುತ್ತೇನೆ ಎಂದರು. ಜನರ ಕೆಲಸ ಮಾಡುವ ವೇಳೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ರಾಜಕೀಯ ಮಾಡದೆ ಜನಪ್ರತಿನಿಧಿಗಳಿಗಾಗಿ ಕಾಯದೆ ನೇರವಾಗಿ ತಾವುಗಳೇ ಜನರೊಂದಿಗೆ ಸ್ಪಂದಿಸಿ ಜನರ ಕೆಲಸ ಮಾಡಿಕೊಟ್ಟು ಜನರ ಆಶೋತ್ತರಗಳನ್ನು ಈಡೇರಿಸಿ ಎಂದರು.
ಮಾಜಿ ಸಚಿವ ಬಿ ರಮಾನಾಥ ರೈ, ಎಂಎಲ್ಸಿ ಡಾ ಮಂಜುನಾಥ ಭಂಡಾರಿ, ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಮಾಜಿ ಎಂಎಲ್ಸಿ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಎಸ್ಪಿ ಯತೀಶ್ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್, ಪುತ್ತೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸಹಿತ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
0 comments:
Post a Comment