ಬಂಟ್ವಾಳ, ಆಗಸ್ಟ್ 01, 2025 (ಕರಾವಳಿ ಟೈಮ್ಸ್) : ತಾಲೂಕಿನ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ವಿಟ್ಲ ಠಾಣಾ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ.
ಆರೋಪಿ ಅಬ್ದುಲ್ ಸಮದ್ ಎಂಬಾತ ಹೊಳೆಯಿಂದ ಯಂತ್ರದ ಮೂಲಕ ಮರಳನ್ನು ಅಕ್ರಮವಾಗಿ ತೆಗೆದು ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ್ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ಕೇರಳ ಗಡಿಭಾಗದಿಂದ ಅಂದಾಜು ಒಂದು ಕಿ ಮೀ ದೂರದ ಸಾಲೆತ್ತೂರು ಕಟ್ಟತ್ತಿಲ ಹೊಳೆಯ ಸೇತುವೆ ಬಳಿ, ಸುಮಾರು 2 ರಿಂದ 3 ಪಿಕಪ್ ನಷ್ಟು ಮರಳು ಮತ್ತು ಹೊಳೆಯಿಂದ ಮರಳನ್ನು ತೆಗೆಯಲು ಉಪಯೋಗಿಸುತ್ತಿದ್ದ ಯಂತ್ರ, ಕಬ್ಬಿನದ ಜಾಲರಿ, ಪೈಬರ್ ಬುಟ್ಟಿಗಳು, ಕಬ್ಬಿಣದ ಹಾರೆ ಹಾಗೂ ಕೃತ್ಯಕ್ಕೆ ಬಳಸಿದ ಇತರೆ ಸೊತ್ತುಗಳು ಕಂಡು ಬಂದಿದ್ದು, ಸದ್ರಿ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment