ಬಂಟ್ವಾಳ, ಆಗಸ್ಟ್ 30, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಸೀಸನ್-3 ಕಾರ್ಯಕ್ರಮ ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.
ನಾರಾಯಣ ಗುರು ವೃತ್ತದ ಬಳಿಯಿಂದ ಕೃಷ್ಣ ವೇಷದಲ್ಲಿರುವ ಪುಟಾಣಿ ಮಕ್ಕಳೊಂದಿಗೆ ಹಿರಿಯ ಶಿಕ್ಷಕ ಚೆನ್ನಕೇಶವ ಮತ್ತು ನವೀನ್ ಬಡ್ಡಕಟ್ಟೆ ಪಾಂಚಜನ್ಯ ಮೊಳಗುವ ಮೂಲಕ ಮೆರವಣೆಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಗೋವಿನೊಂದಿಗೆ ಗೋಪಾಲಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ, ಯಶೋಧ ಕೃಷ್ಣ, ರಾಧಾಕೃಷ್ಣ, ವೇಷಧಾರಿಗಳೊಂದಿಗೆ ವಾಸುದೇವ ಆದಿಶೇಷನೊಂದಿಗೆ ಆಗಮನ ಹಾಗೂ ಗೋಪಿಕಾಸ್ತ್ರೀ ವೇಷಭೂಷಣ ಗಮನ ಸೆಳೆಯಿತು. ಮೆರವಣಿಗೆಯ ಕೊನೆಗೆ ಸಮುದಾಯ ಭವನದಲ್ಲಿ ಮಹಿಳಾ ಘಟಕದ ಸದಸ್ಯೆಯರು ಎಲ್ಲಾ ಕೃಷ್ಣ ವೇಷಧಾರಿಗಳಿಗೆ ಆರತಿ ಎತ್ತಿ ಹಣೆಗೆ ತಿಲಕ ಇಟ್ಟರು.
ಸಭಾಂಗಣದ ಹೊರಾಂಗಣದಲ್ಲಿ ನಿರ್ಮಿಸಿದ ಗೋವರ್ಧನಗಿರಿಯಡಿಯಲ್ಲಿ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಕರುವಿಗೆ ಆಹಾರ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಸಿ ಪೆರ್ನೆ, ಮಹಿಳಾ ಘಟಕದ ಆಧ್ಯಕ್ಷೆ ಆಶಾ ಗಿರಿಧರ ಕುಲಾಲ ಮಠ, ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಉಪಾಧ್ಯಕ್ಷೆ ಜಲಜಾಕ್ಷಿ ಪಾಣೆಮಂಗಳೂರು, ದಳಪತಿ ಜಯಂತ ಅಗ್ರಬೈಲು, ಕಾಯದರ್ಶಿ ರಾಜೇಶ್ ಭಂಡಾರಿಬೆಟ್ಟು ಭಾಗವಹಿಸಿದ್ದರು.
ವೈಷ್ಣವಿ ವೈ ಕೆ ಸ್ವಾಗತಿಸಿದರು. ಸೇವಾದಳದ ಸದಸ್ಯೆ ಸುಕನ್ಯ ಸೌತೆಬಳ್ಳಿ, ಕಿಶೋರ್ ಕೈಕುಂಜೆ, ತಾರನಾಥ ಮೊಡಂಕಾಪು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ವಿಭಾಗದಲ್ಲಿ ಕೃಷ್ಣ ವೇಷ ಸ್ಪರ್ಧೆ ನಡೆಯಿತು.
0 comments:
Post a Comment