ಬಂಟ್ವಾಳ, ಅಕ್ಟೋಬರ್ 13, 2025 (ಕರಾವಳಿ ಟೈಮ್ಸ್) : ಮಂಚಿ-ಕೊಳ್ನಾಡು ಪ್ರೌಢಶಾಲೆಯ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಮಮತಾ ಪಿ ಶೆಟ್ಟಿ ಮಂಚಿ ಆಯ್ಕೆಯಾಗಿದ್ದಾರೆ.
1977ರಲ್ಲಿ ಸ್ಥಾಪನೆಗೊಂಡಿರುವ ಮಂಚಿ-ಕೊಳ್ನಾಡು ಶಾಲೆಯು 2027ಕ್ಕೆ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು, ಶಾಲಾ ಹಿತೈಷಿಗಳನ್ನು, ಊರಿನ ವಿದ್ಯಾಭಿಮಾನಿಗಳನ್ನು ಸೇರಿಸಿ ನಡೆಸಲಾದ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಮ್ಯಾಕ್ಸಿಮ್ ಫರ್ನಾಂಡಿಸ್, ಪ್ರಧಾನ ಕೋಶಾಧಿಕಾರಿಯಾಗಿ ಉಮಾನಾಥ ರೈ ಮೇರಾವು ಹಾಗೂ ಪ್ರಧಾನ ಸಂಚಾಲಕರಾಗಿ ರಮಾನಂದ ನೂಜಿಪ್ಪಾಡಿ ಅವರನ್ನು ಆರಿಸಲಾಯಿತು.
ಗೌರವಾಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, ಶಾಲೆಯ ಹಿರಿಯ ವಿದ್ಯಾರ್ಥಿಯಾಗಿ ಶಾಲೆಯ ಋಣವನ್ನು ತೀರಿಸುವ ಸದಾವಕಾಶ ಒದಗಿ ಬರುವುದು ಭಾಗ್ಯವಾಗಿದೆ. ಬದುಕು ಕಟ್ಟಿಕೊಟ್ಟ ಶಾಲೆಯ ಸುವರ್ಣ ಸಂಭ್ರಮಕ್ಕೆ ಎಲ್ಲರೂ ಸಾಕ್ಷಿಗಳಾಗಬೇಕು ಎಂದರು.
ಮಾರ್ಗದರ್ಶನ ಸಮಿತಿಯ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಟಿ ಮಾತನಾಡಿ, ಸುವರ್ಣ ಸಂಭ್ರಮವನ್ನು ಕಟ್ಟಡ ನಿರ್ಮಾಣದ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಲು ಮುಂದಾಗಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳು, ಶಾಲೆಯ ಹಿತೈಷಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಶಾಲಾ ಮುಖ್ಯ ಶಿಕ್ಷಕರಾದ ಸುಶೀಲ ವಿಟ್ಲ ಸುವರ್ಣ ಸಂಭ್ರಮದ ಆಶಯ ನುಡಿಗಳನ್ನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್ ಮಾತನಾಡಿ, ಸೌಹಾರ್ಧತೆ, ಸಮಾನತೆಯನ್ನು ಸಾರುವ ಶಾಲೆ ಎಲ್ಲಾ ಸಮುದಾಯದವರ ದೇಗುಲವಾಗಿದ್ದು ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮ ಮೂರ್ತಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಗಣೇಶ್ ಪ್ರಭು, ಸುಲೈಮಾನ್ ಜಿ ಸುರಿಬೈಲು, ಗಿರೀಶ್ ಗೌಡ ಮತ್ತು ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ತಾರಾನಾಥ್ ಕೈರಂಗಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.















0 comments:
Post a Comment