ಬೆಳಗಾವಿ, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ದೈವಾರಾಧಾನೆಯಲ್ಲಿ ನಿರತರಾಗಿರುವ ತುಳುನಾಡಿನ ಹಲವು ಸಮುದಾಯಗಳು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಅವರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪರಿಶಿಷ್ಟ ಜಾತಿಗೆ ಸೇರಿದ ಬಂಧುಗಳಾದ ದೈವ ನರ್ತಕರಲ್ಲಿ ನಲಿಕೆ, ಪರವ, ಪಂಬದ, ಪಾಣರ ಹೀಗೆ ವಿವಿಧ ವರ್ಗಳಿದ್ದು, ದೈವ ಪಾತ್ರಿಗಳಲ್ಲಿ ಮುಂಡಾಲ, ಆದಿ ದ್ರಾವಿಡ, ಮುಗೇರ, ಬಾಕುಡ, ಸಮಗಾರ ಅಲ್ಲದೇ ರಾಜನ್ ದೈವ ಪಾತ್ರಿಗಳಾಗಿ ಜೈನ, ಬಂಟ, ಬಿಲ್ಲವದವರಿದ್ದು, ದೈವದ ಚಾಕರಿ ಮಾಡುವವರಲ್ಲಿಯೂ ಅನೇಕ ವರ್ಗಗಳಿವೆ. ಸರ್ಕಾರ ಇದನ್ನು ಬಹಳ ಸೂಕ್ಷ್ಮವಾಗಿ ಅರ್ಥೈಸಿಕೊಂಡು ಆಯಾ ಹೆಸರುಗಳನ್ನೇ ಉಲ್ಲೇಖಿಸಬೇಕು ಹೊರತು ಸಾಹಿತಿಗಳು, ಕಲಾವಿದರು, ಲಲಿತ ಕಲೆ, ಶಿಲ್ಪ ಕಲೆ ಮೊದಲಾದ ಸಾಲಿಗೆ ಸೇರಿಸಬಾರದು. 40 ವರ್ಷಕ್ಕಿಂತ ಕಡಿಮೆ ಹಾಗೂ 58 ವರ್ಷಕ್ಕಿಂತ ಮೇಲ್ಪಟ್ಟ ಅನೇಕರು ಸಹ ದೈವಾರಾಧನೆಯಲ್ಲಿ ತೊಡಗಿಕೊಂಡಿದ್ದು ಅವರಿಗೂ ಅನುಕೂಲವಾಗುವಂತಹ ಮಾನದಂಡಗಳನ್ನು ರೂಪಿಸಬೇಕು ಎಂದರು.
ನಲಿಕೆ ಸಮುದಾಯದ ಕೇವಲ ಮೂರು ಜನರಿಗೆ ಮಾಶಾಸನ ನೀಡಲಾಗುತ್ತಿದೆ ಎಂದು ಸರಕಾರ ಅಧಿವೇಶನದಲ್ಲಿ ಉತ್ತರ ನೀಡಿದ್ದು, ನಮ್ಮ ಜಿಲ್ಲೆಯಲ್ಲಿ ದೈವಾರಾದನೆ ಚಾಕರಿಯಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ಬಹಳಷ್ಟಿದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಅವರಿಗೆ ಪಿ ಎಫ್, ಇ ಎಸ್ ಐ, ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲವಾಗಿದ್ದು ಅವರ ಆದಾಯ ಹೆಚ್ಚುಗೊಳಿಸುವುದು, ಅವರೆಲ್ಲರಿಗೂ ಪ್ರತಿ ತಿಂಗಳು ಎರಡೂವರೆ ಸಾವಿರ ಮಾಸಾಶನ, ಬೇರೆ ರಾಜ್ಯಗಳಿಂದ ಮದುವೆಯಾಗಿ ಬಂದಾಗ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿ ಆಗುತ್ತಿರುವ ತಾರತಮ್ಯ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದವರು ಅಗ್ರಹಿಸಿದರು.














0 comments:
Post a Comment