ಸುಳ್ಯ, ಡಿಸೆಂಬರ್ 31, 2025 (ಕರಾವಳಿ ಟೈಮ್ಸ್) : ಸುಳ್ಯ ಕಸಬಾ ಗ್ರಾಮದ ನಿವಾಸಿ, ಅಟೋ ರಿಕ್ಷಾ ಚಾಲಕ ಅಬ್ದುಲ್ ಜಬ್ಬಾರ್ ಎಂಬವರ ಸಾವು ಹಲ್ಲೆಯಿಂದಾಗಿ ನಡೆದಿರುವುದು ಎಂದು ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ ಬಂದಿರುವ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುಳ್ಯ ಕಸಬಾ ನಿವಾಸಿ ಮೊಹಮ್ಮದ್ ರಫೀಕ್ (41) ಹಾಗೂ ಸುಳ್ಯ-ಸಂಪಾಜೆ ನಿವಾಸಿ ಮನೋಹರ್ ಕೆ ಎಸ್ ಅಲಿಯಾಸ್ ಮನು (42) ಎಂದು ಹೆಸರಿಸಲಾಗಿದೆ.
ಅಟೋ ರಿಕ್ಷಾ ಚಾಲಕ ಅಬ್ದುಲ್ ಜಬ್ಬಾರ್ ಅವರನ್ನು ಕಳೆದ ಅಕ್ಟೋಬರ್ 16 ರಂದು ಮಧ್ಯಾಹ್ನ ವೇಳೆ ಆರೋಪಿಗಳು ಬಾಡಿಗೆ ನೆಪದಲ್ಲಿ ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ, ಅಲ್ಲಿಂದ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ಕಳುಹಿಸಿರುತ್ತಾರೆ. ಇದರಿಂದ ಗಾಯಗೊಂಡ ಜಬ್ಬಾರ್ ಅವರು ಅ 17 ರಂದು ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಅಬ್ದುಲ್ ಜಬ್ಬಾರ್ ಅವರ ಸಾವಿಗೆ ರಪೀಕ್ ಪಡು ಮತ್ತು ಇತರರು ಕಾರಣರಾಗಿರುತ್ತಾರೆ ಎಂಬುದಾಗಿ ಅ 18 ರಂದು ಜಬ್ಬಾರ್ ಅವರ ಪತ್ನಿ ಸುಮಯ್ಯಾ (35) ಅವರು ನೀಡಿದ ದೂರಿನಂತೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2025, ಕಲಂ 105 ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮ ಅಬ್ದುಲ್ ಜಬ್ಬಾರ್ ಅವರು ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿರುವುದರಿಂದ ಪ್ರಸ್ತುತ ಸದ್ರಿ ಪ್ರಕರಣವನ್ನು ಕಲಂ 103 ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣದ ಮುಂದಿನ ತನಿಖೆಗಾಗಿ ಪೆÇಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿದ್ದಾರೆ,



















0 comments:
Post a Comment