ಮಂಗಳೂರು, ಜನವರಿ 17, 2026 (ಕರಾವಳಿ ಟೈಮ್ಸ್) : ಡ್ರಗ್ಸ್ ಮುಕ್ತ ಮಂಗಳೂರು ಹಾಗೂ ಡ್ರಗ್ಸ್ ಮುಕ್ತ ಶೈಕ್ಷಣಿಕ ಕ್ಯಾಂಪಸ್ ಎಂಬ ಧ್ಯೇಯವನ್ನಿಟ್ಟುಕೊಂಡು ನಿರಂತರ ಕಾರ್ಯಾಚರಣೆಗಿಳಿದಿರುವ ಮಂಗಳೂರು ಪೊಲೀಸರು ಶುಕ್ರವಾರ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಸೂಚನೆ ಮೇರೆಗೆ ನಗರದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳದ ವಿದ್ಯಾರ್ಥಿಗಳ ಸಹಿತ ಎಲ್ಲ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದಿಢೀರ್ ತಪಾಸಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆ ಕಳೆದ ಸುಮಾರು ಆರೇಳು ತಿಂಗಳಿಂದ ಮಂಗಳೂರು ಪೊಲೀಸರು ನಡೆಸುತ್ತಿರುವ ಡ್ರಗ್ಸ್ ಕಾರ್ಯಾಚರಣೆಯ ಬಗ್ಗೆ ಕಿರು ಮೌಲ್ಯಮಾಪನ ನಡೆಸಿದಂತೆಯೂ ಆಗಿದೆ. ವಿದ್ಯಾರ್ಥಿ ಸಮುದಾಯ ಎಚ್ಚೆತ್ತುಕೊಂಡರೆ ಈ ಮಹಾಪಿಡುನ್ನು ಬೇಗನೆ ಒದ್ದೋಡಿಸಲು ಸಾಧ್ಯ ಎಂಬುದನ್ನು ಮನಗಂಡಿರುವ ಪೊಲೀಸ್ ಕಮಿಷನರ್ ರೆಡ್ಡಿ ಅವರು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಈ ಮಾದಕ ವಸ್ತು ಪರೀಕ್ಷಾ ಡ್ರೈವ್ ನಡೆಸಿದ್ದಾರೆ.
ಈ ಕಾರ್ಯಾಚರಣೆ ವೇಳೆ ನಗರದ ವಿವಿಧ ಕಾಲೇಜುಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಲಾಯಿತು. ಪರೀಕ್ಷಾ ಫಲಿತಾಂಶಗಳು ಪೊಲೀಸರ ನಿರಂತರ ಕಾರ್ಯಾಚರಣೆಗೆ ಫಲ ನೀಡಿದಂತಿದ್ದು, ಬಹುತೇಕ ವಿದ್ಯಾರ್ಥಿಗಳು ನೆಗೆಟಿವ್ ಫಲಿತಾಂಶವನ್ನೇ ಪಡೆದುಕೊಂಡಿದ್ದಾರೆ. ಇಂದಿನ ಕಾರ್ಯಾಚರಣೆಯ ಫಲಿತಾಂಶಗಳು ಜಿಲ್ಲೆಯ ನಾಗರಿಕರ ಪಾಲಿಗೂ ಸಮಾಧಾನವನ್ನೇ ತಂದಿದ್ದು, ಈ ಹಿಂದಿನ ಘಟನೆಗಳಿಗೆ ಹೋಲಿಸಿದರೆ ಉತ್ತಮ ಸುಧಾರಣೆ ಕಂಡಂತಾಗಿದೆ. ಇದು ಇನ್ನೂ ಸುಧಾರಣೆ ಕಾಣಬೇಕಾಗಿದೆ ಎಂದು ಕಮಿಷನರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸೆನ್ ವಿಭಾಗದ ಎಸಿಪಿ ಹಾಗೂ ಸೌತ್ ಎಸಿಪಿ ನೇತೃತ್ವದಲ್ಲಿ ಈ ಕಾರ್ಯಾಚರ ನಡೆಸಲಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ದಿಢೀರ್ ಕಾರ್ಯಾಚರಣೆ ಮುಂದುವರಿಯಲಿದೆ. ಇಂತಹ ಕಾರ್ಯಾಚರಣೆಗಳು ಮಾದಕ ವ್ಯಸನವನ್ನು ನಿಯಂತ್ರಿಸಲು ಹಾಗೂ ಆರಂಭದಲ್ಲೇ ಇದನ್ನು ಹೊಸಕಿ ಹಾಕಲು ಇದರಿಂದ ಸಾಧ್ಯವಾಗಲಿದೆ ಎಂದು ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಕೊಣಾಜೆ ವ್ಯಾಪ್ತಿಯಲ್ಲಿ ಪಿ ಎ ಕಾಲೇಜಿನ ಎರಡು ಬಸ್ಸುಗಳನ್ನು ನಿಲ್ಲಿಸಿ 87 ವಿದ್ಯಾರ್ಥಿಗಳ ಮಾದಕ ವಸ್ತು ಪರೀಕ್ಷೆ ನಡೆಸಲಾಯಿತು. ಎಲ್ಲಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಅದೇ ರೀತಿ ಉಳ್ಳಾಲ ವ್ಯಾಪ್ತಿಯಲ್ಲಿ ಖಾಸಗಿ ಬಸ್ಸುಗಳು ಮತ್ತು ಕಾಲೇಜು ಬಸ್ಸುಗಳಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್. ಹೆಗ್ಡೆ), ಕಣಚೂರು ಸಂಸ್ಥೆ, ಪಿ.ಎ. ಕಾಲೇಜು, ಸೈಂಟ್ ಅಲೋಶಿಯಸ್ ಕಾಲೇಜು ಮತ್ತು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು.
ಒಟ್ಟು 103 ಪರೀಕ್ಷೆಗಳು ಪೂರ್ಣಗೊಂಡಿದ್ದು, ಅವುಗಳಲ್ಲಿ 101 ನಕಾರಾತ್ಮಕ ಫಲಿತಾಂಶ ಬಂದಿದೆ. ಇನ್ನೂ ಹತ್ತು ಪರೀಕ್ಷೆಗಳು ಪ್ರಗತಿಯಲ್ಲಿವೆ, ಸುಮಾರು 200ರ ಹತ್ತಿರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇತರ ಎಲ್ಲಾ ವಿದ್ಯಾರ್ಥಿಗಳು ನಕಾರಾತ್ಮಕ ಫಲಿತಾಂಶ ಹೊಂದಿದ್ದಾರೆ.
ಒಟ್ಟಾರೆಯಾಗಿ, ಫಲಿತಾಂಶಗಳು ಸಮಾಧಾನಕರವಾಗಿದ್ದು, ಮಾಧ್ಯಮ ಸ್ನೇಹಿತರ ಸಕ್ರಿಯ ಬೆಂಬಲದೊಂದಿಗೆ ಪೆÇಲೀಸ್, ಆಡಳಿತ, ಶಿಕ್ಷಣ ಸಂಸ್ಥೆಗಳು ಹಾಗೂ ನಾಗರಿಕ ಸಮಾಜದ ನಿರಂತರ ಪ್ರಯತ್ನಗಳಿಂದ ಈ ಫಲಿತಾಶಂ ಪಡೆಯಲು ಸಹಕಾರಿಯಾಗಿದೆ. ಮಾದಕ ವಸ್ತು ಮುಕ್ತ ಮಂಗಳೂರು ಮತ್ತು ಮಾದಕ ವಸ್ತು ಮುಕ್ತ ಶೈಕ್ಷಣಿಕ ಕ್ಯಾಂಪಸ್ ಗುರಿ ತಲುಪಲು ಈ ಸಾಮೂಹಿಕ ಪ್ರಯತ್ನಗಳು ಮುಂದುವರಿಯಬೇಕಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


















0 comments:
Post a Comment