ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಸಿಎಂ, ಸಿದ್ದು ಸಹಿತ ಗಣ್ಯರ ಕಂಬನಿ - Karavali Times ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಸಿಎಂ, ಸಿದ್ದು ಸಹಿತ ಗಣ್ಯರ ಕಂಬನಿ - Karavali Times

728x90

25 April 2020

ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಸಿಎಂ, ಸಿದ್ದು ಸಹಿತ ಗಣ್ಯರ ಕಂಬನಿ

ಮಹೇಂದ್ರ ಕುಮಾರ್ ಮೃತದೇಹ 
ಮಹೇಂದ್ರ ಕುಮಾರ್



ಬೆಂಗಳೂರು (ಕರಾವಳಿ ಟೈಮ್ಸ್) : ಪ್ರಗತಿಪರ ಚಿಂತಕರಾಗಿ ಬದಲಾಗಿದ್ದ, ಭಜರಂಗ ದಳ ಸಂಘಟನೆಯ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಅವರು ಹೃದಯಾಘಾತವಾಗಿ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಮಹೇಂದ್ರ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ನಾಡಿನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ



ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ. ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು. ಅವರ ದು:ಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಮಾತು ಬಿಟ್ಟಿದ್ದೆ, ಸಂಬಂಧ ಕಳೆದುಕೊಂಡಿರಲಿಲ್ಲ : ಸಚಿವ ಸಿಟಿ ರವಿ ಸಂತಾಪ


ಪ್ರಗತಿ ಪರ ಚಿಂತಕ ಹಾಗೂ ಭಜರಂಗ ದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಸಚಿವ ಸಿ.ಟಿ. ರವಿ ಅವರು ಸಂತಾಪ ಸೂಚಿಸಿದ್ದಾರೆ. ಫೇಸ್ ಬುಕ್ ಮೂಲಕ ಸಂತಾಪ ಸೂಚಿಸಿದ ಸಚಿವರು, ಇಂದು ಬೆಳಗ್ಗೆ ಎದ್ದ ತಕ್ಷಣ ಒಂದು ಆಘಾತಕಾರಿ ಸುದ್ದಿ. ಬಹಳ ವರ್ಷಗಳ ಕಾಲ ನಮ್ಮ ಸಂಘಟನೆಯ ಜವಾಬ್ದಾರಿ ಹೊತ್ತು ಕೆಲಸ ಮಾಡಿ, ಕಳೆದ ಹತ್ತು ವರ್ಷಗಳಿಂದ ಸಂಘಟನೆಯಿಂದ ದೂರ ಹೋಗಿ, ವೈಚಾರಿಕ ಪ್ರೀತಿ-ವೈಚಾರಿಕ ವಿರೋಧವಾಗಿ ಬದಲಾಗಿ ಇತ್ತೀಚಿನ ದಿನಗಳಲ್ಲಿ ಅರಿವಿದ್ದೋ, ಇಲ್ಲದೆಯೋ ಕೆಲವು ರಾಷ್ಟ್ರ ಘಾತುಕ ಸಂಘಟನೆಗಳ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮಿತ್ರ ಕೊಪ್ಪದ ಮಹೇಂದ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಹೇಂದ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದೆ ನಮ್ಮನ್ನು ಅಗಲಿದ್ದಾನೆ. ಅವನ ಆತ್ಮಕ್ಕೆ ಸದ್ಗತಿ ದೊರಕಲಿ, ಅವನ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಓಂ ಶಾಂತಿ, ಶಾಂತಿ, ಶಾಂತಿ ಎಂದು ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಂಸದೆ ಶೋಭಾ ಸಂತಾಪ 


ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ, ಮಿತ್ರ, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಅಪಾರವಾದ ದುಃಖವುಂಟಾಗಿದೆ. ರಾಜ್ಯದಲ್ಲಿ ಭಜರಂಗದಳವನ್ನು ತಳಮಟ್ಟದಿಂದ ಕಟ್ಟಿಬೆಳೆಸುವಲ್ಲಿ ಅವರ ಶ್ರಮ ಬಹಳ ದೊಡ್ಡದು. ಮಹೇಂದ್ರ ಕುಮಾರ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಕಂಬನಿ


ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ. ವ್ಯವಸ್ಥೆಯ ತಲ್ಲಣಗಳಿಗೆ ಮಿಡಿಯುತ್ತಿದ್ದ ಜೀವ ಕಮರಿ ಹೋದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಹೇಂದ್ರ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿರುವ ಅವರು, ಹಿಂದೂಪರ ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದ ಮಹೇಂದ್ರಕುಮಾರ್ ಇದ್ದಕ್ಕಿದ್ದಂತೆ ಬದಲಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ತಮ್ಮೊಂದಿಗೆ ಮುಕ್ತವಾಗಿ ಸಮಾಜದ ತಲ್ಲಣಗಳ ಬಗ್ಗೆ ಚರ್ಚಿಸುತ್ತಿದ್ದರು.ಆನಂತರ ಪಕ್ಷ ರಾಜಕೀಯದಿಂದ ದೂರ ಸರಿದ ಅವರು ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರಗತಿಪರ ಚಿಂತಕ ಗುಣವನ್ನು ಬಿಡಲೇ ಇಲ್ಲ. ಆದರೆ ಸಿದ್ಧಾಂತಗಳು ಬದಲಾಗಿದ್ದನ್ನು ತಾವು ಹತ್ತಿರದಿಂದ ಕಂಡಿರುವುದಾಗಿ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಸಿಎಂ, ಸಿದ್ದು ಸಹಿತ ಗಣ್ಯರ ಕಂಬನಿ Rating: 5 Reviewed By: karavali Times
Scroll to Top