ಯೂಸುಫ್ ಕರಂದಾಡಿ |
ಬಂಟ್ವಾಳ (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ಕೊರೋನಾ ವೈರಸ್ ಅಪಾಯಕಾರಿ ಹಂತಕ್ಕೆ ತಲುಪುತ್ತಿರುವ ಹಿನ್ನಲೆಯಲ್ಲಿ ದೇಶದ ಪ್ರಧಾನಿಯವರು ಕೈಗೊಂಡ ಲಾಕ್ ಡೌನ್ ಕ್ರಮ ಸರಿಯಾದುದೇ. ಆದರೆ ದೀರ್ಘ ದಿನಗಳ ಕಾಲ ಜನರನ್ನು ಗೃಹಬಂಧನಕ್ಕೆ ಒಡ್ಡುವ ಸಂದರ್ಭ ಜನತೆಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳೂ ಸೇರಿದಂತೆ ಜವಾಬ್ದಾರಿಯುತ ಸರಕಾರವನ್ನು ಪ್ರತಿನಿಧಿಸುವವರು ಮಾಡಬೇಕಿದೆ ಎಂದು ಸಜಿಪಮುನ್ನೂರು ಗ್ರಾ ಪಂ ಸದಸ್ಯ ಯೂಸುಫ್ ಕರಂದಾಡಿ ಆಗ್ರಹಿಸಿದ್ದಾರೆ.
ಕೊರೋನಾ ವೈರಸ್ ನಿಭಾಯಿಸುವಲ್ಲಿ ದೇಶದ ಪ್ರಧಾನಿ ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಈ ಹಿನ್ನಲೆಯಲ್ಲಿ ಕೈಗೊಂಡ ಕ್ರಮಗಳೆಲ್ಲವನ್ನೂ ದೇಶದ ಜನ ಒಪ್ಪಿಕೊಳ್ಳುವಂತದ್ದೆ. ಆದರೆ ಜನರ ಬದುಕುವ ಹಕ್ಕಿನ ಬಗ್ಗೆಯೂ ಸರಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ದೀರ್ಘ ದಿನಗಳವರೆಗೆ ದೇಶವೇ ಸ್ಥಬ್ಧಗೊಳ್ಳುವಾಗ ದಿನಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ತುತ್ತಿಗೂ ಪರದಾಡಬೇಕಾದ ಸನ್ನಿವೇಶ ಎದುರಾಗಬಹುದು. ಆಹಾರ, ಆರೋಗ್ಯ ಸಹಿತ ದೈನಂದಿನ ಮೂಲಭೂತ ಸೌಲಭ್ಯಕ್ಕಾಗಿ ದೇಶದ ಪ್ರಜೆಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುವುದೂ ಸರಕಾರಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ತುರ್ತು ಚಿಂತನೆ ನಡೆಸಬೇಕಾಗಿದೆ. ಈ ಬಗ್ಗೆ ವಿಶೇಷ ಪ್ಯಾಕೇಜ್ಗಳನ್ನು ಘೋಷಿಸುವ ಮೂಲಕ ಸರಕಾರ ಕೊರೋನೊಗಿಂತಲೂ ಹಸಿವಿನಿಂದ ಜನ ತೊಂದರೆಗೊಳಗಾಗದಂತೆ ನೋಡಿಕೊಳ್ಳಬೇಕಾಗಿದೆ.
ಸರಕಾರ ನೀಡುವ ಪಡಿತರ ವ್ಯವಸ್ಥೆಗಳನ್ನು ಎಪಿಎಲ್-ಬಿಎಪಿಎಲ್ ವಿಭಾಗ ನಡೆಸದೆ ಕ್ಲಿಷ್ಟಕರ ಸಂದರ್ಭದಲ್ಲಿ ಎಲ್ಲ ಕುಟುಂಬಗಳಿಗೂ ನೀಡಿ ಆಹಾರ ಭದ್ರತೆಯನ್ನು ನೀಡಬೇಕಾಗಿದೆ. ಅಲ್ಲದೆ ಜನರ ಅವಶ್ಯಕತೆಗಳಾದ ಆಹಾರ, ನೀರು, ವಿದ್ಯುತ್ ಮೊದಲಾದವುಗಳ ಬಗ್ಗೆ ವಿಶೇಷ ರಿಯಾಯಿತಿ ಪ್ರಕಟಿಸುವೆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೇಡಿಕೆಗಳಿಗೂ ಸರಕಾರ ಸ್ಪಂದಿಸಬೇಕಾಗಿದೆ ಎಂದು ಯೂಸುಫ್ ಕರಂದಾಡಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
0 comments:
Post a Comment