ವಿಶಿಷ್ಟ ಅನುಭವಗಳಿಗೆ ತೆರೆದುಕೊಂಡು ಮತ್ತೆ ಬರುತ್ತಿದೆ ಪುಣ್ಯಗಳ ಕೊಯ್ಲು ಕಾಲ ಪವಿತ್ರ ರಂಝಾನ್ - Karavali Times ವಿಶಿಷ್ಟ ಅನುಭವಗಳಿಗೆ ತೆರೆದುಕೊಂಡು ಮತ್ತೆ ಬರುತ್ತಿದೆ ಪುಣ್ಯಗಳ ಕೊಯ್ಲು ಕಾಲ ಪವಿತ್ರ ರಂಝಾನ್ - Karavali Times

728x90

23 April 2020

ವಿಶಿಷ್ಟ ಅನುಭವಗಳಿಗೆ ತೆರೆದುಕೊಂಡು ಮತ್ತೆ ಬರುತ್ತಿದೆ ಪುಣ್ಯಗಳ ಕೊಯ್ಲು ಕಾಲ ಪವಿತ್ರ ರಂಝಾನ್

 

 

ಕರಾವಳಿ ಟೈಮ್ಸ್ ರಮಳಾನ್ ವಿಶೇಷ ಲೇಖನ


    ಪವಿತ್ರ ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲೊಂದಾಗಿದೆ ರಂಝಾನ್ ತಿಂಗಳ ಪೂರ್ತಿ ಉಪವಾಸ ವೃತಾಚರಣೆ. ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಾಗಿರುವ ಪವಿತ್ರ ರಂಝಾನ್‍ನಲ್ಲಿ ಉಪವಾಸ ವೃತವನ್ನು ಆಚರಿಸುವುದು ಪ್ರಾಯ ಪೂರ್ತಿಯಾಗಿರುವ, ಬುದ್ದಿ ಇರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ. ಸದ್ರಿ ರಂಝಾನ್ ತಿಂಗಳು ಮತ್ತೆ ಈ ವರ್ಷವೂ ಆಗಮಿಸುತ್ತಿದೆ. ಮುಸ್ಲಿಂ ಜಗತ್ತು ಈ ಪವಿತ್ರ ತಿಂಗಳನ್ನು ಸ್ವಾಗತಿಸಲು ಎಲ್ಲ ರೀತಿಯಲ್ಲೂ ಸಜ್ಜಾಗುತ್ತಿದೆ. ಆದರೆ ಈ ಬಾರಿಯ ರಮಳಾನ್ ತಿಂಗಳು ಮುಸ್ಲಿಂ ಉಮ್ಮತ್ತಿಗೆ ವಿಶೇಷವಾಗಿದ್ದು, ಹತ್ತು-ಹಲವು ನಿರ್ಬಂಧಗಳ ಮೂಲಕ ಎದುರಿಸುವುದು ಅನಿವಾರ್ಯವಾಗಿದೆ. ಪ್ರತೀ ಬಾರಿಯೂ ರಮಳಾನ್ ಪ್ರಾರಂಭವಾದೊಡನೆ ವಿವಿಧ ರೀತಿಯ ವಿಶೇಷತೆಗಳೊಂದಿಗೆ ಜಗಮಗಿಸುವ ಮಸೀದಿ, ಆರಾಧಾನಾಲಯಗಳು ಈ ಬಾರಿ ಕೋವಿಡ್-19 ಮಾಹಾಮಾರಿ ವೈರಸ್ ನಿಯಂತ್ರಣಕ್ಕಾಗಿ ಹೇರಲ್ಪಟ್ಟ ಲಾಕ್‍ಡೌನ್ ಕಾರಣದಿಂದ ಮುಚ್ಚಲ್ಪಟ್ಟು ನೀರವ ಮೌನಕ್ಕೆ ಶರಣಾಗಿವೆ. ಸದಾ ಅಲ್ಲಾಹನ ನಾಮಸ್ಮರಣೆ, ಇಬಾದತ್‍ಗಳೊಂದಿಗೆ ಸೌಂದರ್ಯ ವರ್ದಿಸಿಕೊಳ್ಳುತ್ತಿದ್ದ ಮಸೀದಿಗಳು ಇಬಾದತ್‍ಗಳಿಲ್ಲದೆ ಬಿಕೋ ಎನ್ನುತ್ತಿವೆ.

    ಮಾನವ ಸಮುದಾಯದ ಅದರಲ್ಲೂ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಮಗೆ ಅಲ್ಲಾಹನು ಅನುಗ್ರಹೀತವಾಗಿ ನೀಡಿರುವ ಪುಣ್ಯ ಮಾಸವಾಗಿದೆ ಈ ಪವಿತ್ರ ರಂಝಾನ್. ಪೂರ್ವಿಕ ಪ್ರವಾದಿಗಳ ಅನುಯಾಯಿಗಳು ಈ ಲೋಕದಲ್ಲಿ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ್ದು, ಅಷ್ಟೂ ವರ್ಷಗಳಲ್ಲಿ ಅವರು ಸೃಷ್ಟಿಕರ್ತನ ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಆದರೆ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಮ್ಮ ಆಯುಷ್ಯ ಕೇವಲ 60-70 ವರ್ಷಗಳ ಮಿತಿಯೊಳಗಿದ್ದು, ಅಲ್ಪಾವಧಿಯದ್ದಾಗಿರುತ್ತದೆ. ಹೀಗಿರುತ್ತಾ ಪೂರ್ವಿಕ ಪ್ರವಾದಿಗಳ ಅನುಯಾಯಿಗಳ ದೀರ್ಘಾಯುಷ್ಯದ ಸತ್ಕರ್ಮಗಳೊಂದಿಗೆ ನಮ್ಮ ಅಲ್ಪಾಯುಷ್ಯದ ಆರಾಧನೆಗಳು ಸಮಾನವಾಗಲು ಅಲ್ಲಾಹನು ನಮಗೆ ಕೆಲವೊಂದು ಪುಣ್ಯವೇರಿದ ತಿಂಗಳು, ದಿವಸಗಳು ಹಾಗೂ ಸಮಯಗಳನ್ನು ನಿಗದಿಪಡಿಸಿದ್ದಾನೆ. ಅಂತಹ ಸಂದರ್ಭಗಳನ್ನು ಸಮರ್ಪಕವಾಗಿ ನಾವು ಬಳಸಿಕೊಂಡಿದ್ದೇ ಆದರೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿ ಆರಾಧನಾ ಕರ್ಮಗಳನ್ನು ಕೈಗೊಂಡ ಪೂರ್ವಿಕ ಮಹಾನುಭಾವರ ಸತ್ಕರ್ಮಗಳನ್ನು ಮೀರಿದ ಪ್ರತಿಫಲವನ್ನು ಪಡೆಯುವ ಸದಾವಕಾಶ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಿಗೆ ಅಲ್ಲಾಹು ನೀಡಿದ್ದು, ಅವುಗಳಲ್ಲಿ ಪ್ರಮುಖ ಒಂದಾಗಿದೆ ಪವಿತ್ರ ರಂಝಾನ್ ತಿಂಗಳು.

    ರಮಳಾನ್ ಎಂಬುದರ ಭಾವಾರ್ಥವೇ ಸುಡುವುದು ಎಂದರ್ಥ. ಈ ತಿಂಗಳಲ್ಲಿ ಮುಸಲ್ಮಾನನೊಬ್ಬ ಎಲ್ಲಾ ಕೆಡುಕುಗಳಿಂದ ದೂರವಿದ್ದು, ಅಂತಃಶುದ್ದಿಯಿಂದ ಉಪವಾಸ ವೃತವನ್ನು ಅಲ್ಲಾಹನಿಗಾಗಿ ಆಚರಿಸಿದರೆ ಆತನ ಜೀವಿತದಲ್ಲಿ ಆತ ಮಾಡಿದ ಸಕಲ ಪಾಪಗಳನ್ನು ಅಲ್ಲಾಹನು ಸುಟ್ಟು ಹಾಕುವನು. ಅಲ್ಲದೆ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹದೀಸ್‍ವೊಂದರಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ : “ಪವಿತ್ರ ರಮಳಾನಿನ ಆಗಮನದೊಂದಿಗೆ ಯಾವೊಬ್ಬ ಮುಸಲ್ಮಾನ ಸಂತೋಷದಿಂದ ಪುಳಕಿತಗೊಳ್ಳುತ್ತಾನೋ ಆತನ ಶರೀರವನ್ನು ಅಲ್ಲಾಹನು ಎಲ್ಲಾ ನರಕಗಳಿಂದ ನಿಷಿದ್ದಗೊಳಿಸುತ್ತಾನೆ”. ಎಂದರೆ ಕೇವಲ ರಮಳಾನಿನ ಆಗಮನದೊಂದಿಗೇ ಮುಸಲ್ಮಾನನೊಬ್ಬನ ವಿಜಯ ಪ್ರಾರಂಭವಾಗುತ್ತದೆ. ನಂತರ ಈ ತಿಂಗಳಲ್ಲಿ ಕೈಗೊಳ್ಳುವ ಎಲ್ಲಾ ಸತ್ಕರ್ಮಗಳಿಗೂ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಸತ್ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲವನ್ನು ಪಡೆಯುತ್ತಾನೆ. ರಮಳಾನಿನಲ್ಲಿ ಒಂದು ಕಡ್ಡಾಯ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ 70 ಸತ್ಕರ್ಮಗಳ ಪ್ರತಿಫಲವೂ, ಐಚ್ಛಿಕ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಕಡ್ಡಾಯ ಕರ್ಮದ ಪ್ರತಿಫಲವೂ ಪ್ರಾಪ್ತವಾಗುತ್ತದೆ.

    ರಮಳಾನಿನಲ್ಲಿ ಕೈಗೊಳ್ಳುವ ಉಪವಾಸ ವೃತವು ಕೇವಲ ಅನ್ನಾಹಾರ, ಪಾನೀಯಾದಿಗಳನ್ನು ತೊರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಸಕಲ ದೇಹೇಚ್ಚೆಗಳಿಂದ ದೂರವಿದ್ದರೆ ಮಾತ್ರ ಉಪವಾಸ ವೃತದ ಪರಿಪೂರ್ಣ ಪ್ರತಿಫಲ ದೊರೆಯಲು ಸಾಧ್ಯ. ಶರೀರದ ಯಾವುದಾದರೊಂದು ಅಂಗದ ಮುಖಾಂತರ ಕೈಗೊಳ್ಳುವ ಒಂದು ಸಣ್ಣ ತಪ್ಪಾದರೂ ಅದು ಅಂದಿನ ಆತನ ಉಪವಾಸದ ಪ್ರತಿಫಲದಲ್ಲಿ ಕೊರತೆಯನ್ನು ಅನುಭವಿಸುವಂತೆ ಮಾಡುತ್ತದೆ. ರಮಳಾನಿನ ರಾತ್ರಿ ಸಮಯದಲ್ಲಿ ತರಾವೀಹ್ ಎಂಬ ಸುನ್ನತ್ ನಮಾಜ್ ಪ್ರತ್ಯೇಕ ಸುನ್ನತಾಗಿದ್ದು, ಕನಿಷ್ಠ ಪಕ್ಷ ಅಂತಹ ಸತ್ಕರ್ಮಗಳನ್ನಾದರೂ ಕೈಗೊಳ್ಳುವ ಮೂಲಕ ರವiಳಾನ್ ತಿಂಗಳ ಸಾರ್ಥಕತೆಗೆ ಪ್ರಯತ್ನಿಸಬೇಕಾಗಿದೆ.

    ಈಗಾಗಲೇ ಪವಿತ್ರ ರಮಳಾನ್ ತಿಂಗಳ ಚಂದ್ರದರ್ಶನ ಆಗಿದ್ದು, ಪವಿತ್ರ ರಂಝಾನ್ ಮುಸ್ಲಿಂ ಸಮುದಾಯಕ್ಕೆ ಅನುಗ್ರಹವಾಗಿ ಆಗಮಿಸುತ್ತಿದೆ. ಜಗತ್ತಿನಾದ್ಯಂತ ಮುಸ್ಲಿಮರು ಈ ಒಂದು ತಿಂಗಳ ಆಗಮನಕ್ಕಾಗಿ ಕಳೆದ ಎರಡು ತಿಂಗಳುಗಳಿಂದ ದಿನಪೂರ್ತಿ ಅಲ್ಲಾಹನಲ್ಲಿ ಬೇಡುತ್ತಿದ್ದ ಸನ್ನಿವೇಶ ಕಂಡು ಬರುತ್ತಿತ್ತು. ಇದೀಗ ಆ ಪುಣ್ಯ ಮಾಸ ನಮ್ಮನ್ನು ಸ್ವಾಗತಿಸಿದೆ. ಕಾಲ ಅಂತಿಮ ಘಟ್ಟಕ್ಕೆ ಸಮೀಪಿಸುತ್ತಿದೆ. ಅಂತ್ಯ ದಿವಸದ ಎಲ್ಲ ಪ್ರಮುಖ ಲಕ್ಷಣಗಳನ್ನು ನಾವು ನಮ್ಮ ಕಣ್ಣಲ್ಲಿ ಕಾಣಲು ಆರಂಭಿಸಿದ್ದೇವೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಮಾನವನ ಮರಣ ಅಧಿಕಗೊಳ್ಳುವುದು. ಇದನ್ನು ಇಂದು ನಾವು ವ್ಯಾಪಕವಾಗಿ ಅನುಭವ ವೇದ್ಯವಾಗಿ ಕಾಣುತ್ತಿದ್ದೇವೆ. ಯಾವುದೇ ರೋಗ ಲಕ್ಷಣಗಳಿಲ್ಲದೆ, ಮರಣದ ಬಗ್ಗೆ ನಿರೀಕ್ಷಿಸಿಯೇ ಇರದಂತಹ ಅದೆಷ್ಟೋ ಮಂದಿಗಳು ದಿನದಿಂದ ದಿನಕ್ಕೆ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಇಂದಲ್ಲ ನಾಳೆ ನಮಗೂ ಇದೇ ಗತಿ ಎಂಬುದನ್ನೂ ಯಾವತ್ತೂ ನಾವು ಯೋಚಿಸಿದ್ದೇ ಇಲ್ಲ. ಅಂತಹ ಯೋಚನೆಯನ್ನು ಕೈಗೊಳ್ಳುವ ಅವಕಾಶ ನಮಗೆ ಒದಗಿ ಬಂದೇ ಇಲ್ಲ ಎಂಬುದೇ ನಮ್ಮ ದೌರ್ಭಾಗ್ಯ. ಈ ಹಿನ್ನಲೆಯಲ್ಲಿ ನಮ್ಮ ಪಾಲಿಗೆ ಪವಿತ್ರ ರಂಝಾನ್‍ನಂತಹ ಪುಣ್ಯವೇರಿದ ಸಂದರ್ಭಗಳು ಆರಾಧಾನಾನಿರತರಾಗಲು ಅತ್ಯಂತ ಯೋಗ್ಯವಾಗಿದೆ.

    ಪ್ರತೀ ಬಾರಿಯೂ ರಮಳಾನ್ ಆಗಮನದ ಸಂದರ್ಭ ವಿಶ್ವಾಸಿಗಳು ದಿನದ ಬಹುತೇಕ ಸಮಯಗಳನ್ನು ಅಲ್ಲಾಹನ ಭವನದಲ್ಲಿ ಕಳೆಯುತ್ತಾ ಪ್ರತ್ಯೇಕ ಪ್ರತಿಫಲಗಳನ್ನು ನಿರೀಕ್ಷಿಸುತ್ತಿದ್ದರು. ಆದರೆ ಈ ಬಾರಿಯ ರಮಳಾನ್ ವೃತಾಚರಣೆ ಬಹಳಷ್ಟು ಭಿನ್ನವಾಗಲಿದೆ. ನಿಜಕ್ಕೂ ವಿಶ್ವಾಸಿಯ ಪಾಲಿಗೆ ಅಲ್ಲಾಹನ ನಿಜವಾದ ಪರೀಕ್ಷೆ ಈ ಬಾರಿಯ ರಮಳಾನಿನಲ್ಲಿ ಕಂಡು ಬರುತ್ತಿದೆ. ಪ್ರತಿವರ್ಷದಂತೆ ಮಸೀದಿಗೆ ತೆರಳಿ ಸಾಮೂಹಿಕವಾಗಿ ಆರಾಧನೆಗಳಲ್ಲಿ ತೊಡಗಿಸಿಕೊಳ್ಳುವ ಮಹಾಭಾಗ್ಯ ಈ ಬಾರಿ ಮುಸ್ಲಿಂ ಉಮ್ಮತ್ತಿಗೆ ನಷ್ಟವಾಗಿದೆ. ಆದರೆ ಇಬಾದತಿನ ನಿಜ ರೂಪ ಪ್ರದರ್ಶಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ತಮ್ಮ ತಮ್ಮ ಮನೆಗಳಲ್ಲಿಯೇ ಏಕಾಂಗಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಬಾರಿಯ ರಮಳಾನಿನ ಪ್ರತಿ ಆರಾಧನಾ ಕರ್ಮಗಳನ್ನು ನಿರ್ವಹಿಸಬೇಕಾಗಿದೆ. ಅಲ್ಲಾಹನ ಪರೀಕ್ಷೆಗಳು ಅತ್ಯಂತ ಕಠಿಣ ಹಾಗೂ ಘೋರವಾಗುತ್ತಿರುವ ದಿನಗಳು ನಮ್ಮ ಮುಂದೆ ಬರುತ್ತಿವೆ. ಅಲ್ಲಾಹನ ಸಂತೃಪ್ತಿ ಹಾಗೂ ಪಾರತ್ರಿಕ ಲೋಕದ ವಿಜಯದ ದೃಷ್ಟಿಯಿಂದ ಮಾತ್ರ ಆರಾಧನಾ ಕರ್ಮಗಳು ನೆರವೇರಬೇಕಾಗಿದೆ. ಯಾವುದೇ ಲೌಕಿಕ ಉದ್ದೇಶಗಳು, ತೋರಿಕೆಯ ಮನೋಭಾವಗಳು ಇಲ್ಲದಂತಹ ಆರಾಧನೆಗಳು ನಮ್ಮದಾಗಬೇಕಾಗಿದೆ.

    ಮಸೀದಿಗಳು ಮುಚ್ಚಲ್ಪಟ್ಟಿವೆ ಎಂಬ ಕಾರಣಕ್ಕೆ ಯಾವುದೇ ಕಾರಣಕ್ಕೂ ವಿಶ್ವಾಸಿ ವಿಚಲಿತನಾಗಬೇಕಿಲ್ಲ. ಆರಾಧನೆ ಕೈಗೊಳ್ಳುವ ಮನಸ್ಸುಗಳು ಮುಕ್ತವಾಗಿವೆ. ಲಾಕ್‍ಡೌನ್‍ನಿಂದಾಗಿ ಸಮಯದ ಲಭ್ಯತೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಸರಳ ಜೀವನ ನಡೆಸಬೇಕಾದ ಎಲ್ಲ ಅನಿವಾರ್ಯತೆಗಳೂ ನಮ್ಮ ಮುಂದೆ ಅನಾವರಣಗೊಂಡಿದೆ. ಇನ್ನೊಬ್ಬರನ್ನು ನೋಡಿ ಆಡಂಬರಕ್ಕೆ ಮಾರು ಹೋಗುವ ಯಾವುದೇ ಸನ್ನಿವೇಶ ಇಲ್ಲ. ದಾನ-ಧರ್ಮಗಳು ಸಾಕಷ್ಟು ಪ್ರಮಾಣದಲ್ಲಿ ಮಾಡಲು ಎಲ್ಲ ಅವಕಾಶಗಳು ನಮ್ಮ ಮುಂದೆ ಯಥೇಚ್ಛವಾಗಿವೆ. ಈ ನಿಟ್ಟಿನಲ್ಲಿ ಪವಿತ್ರ ರಮಳಾನ್ ತಿಂಗಳನ್ನು ಸ್ವಾಗತಿಸಲು ಹಾಗೂ ಆ ತಿಂಗಳಿನ ಮಹತ್ವಪೂರ್ಣ ಸಮಯಗಳನ್ನು ಅಲ್ಲಾಹನ ಸಂಪ್ರೀತಿ ಗಳಿಕೆಯ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಅಲ್ಲಾಹು ತೌಫೀಕ್ ನೀಡಲಿ ಆಮೀನ್. ಸರ್ವ ಮುಸ್ಲಿಂ ಜಗತ್ತಿಗೆ ಪವಿತ್ರ ರಂಝಾನ್ ಶುಭಾಶಯಗಳು.....
  • Blogger Comments
  • Facebook Comments

0 comments:

Post a Comment

Item Reviewed: ವಿಶಿಷ್ಟ ಅನುಭವಗಳಿಗೆ ತೆರೆದುಕೊಂಡು ಮತ್ತೆ ಬರುತ್ತಿದೆ ಪುಣ್ಯಗಳ ಕೊಯ್ಲು ಕಾಲ ಪವಿತ್ರ ರಂಝಾನ್ Rating: 5 Reviewed By: karavali Times
Scroll to Top