ವಿದೇಶಗಳಲ್ಲಿರುವ ಭಾರತೀಯರ ಕರೆ ತರಲು ಕೇಂದ್ರ ಚಿಂತನೆ : ಮೇ 7 ರಿಂದ ಹಂತ ಹಂತವಾಗಿ ಪ್ರಕ್ರಿಯೆ ಪ್ರಾರಂಭ ಸಾಧ್ಯತೆ? - Karavali Times ವಿದೇಶಗಳಲ್ಲಿರುವ ಭಾರತೀಯರ ಕರೆ ತರಲು ಕೇಂದ್ರ ಚಿಂತನೆ : ಮೇ 7 ರಿಂದ ಹಂತ ಹಂತವಾಗಿ ಪ್ರಕ್ರಿಯೆ ಪ್ರಾರಂಭ ಸಾಧ್ಯತೆ? - Karavali Times

728x90

4 May 2020

ವಿದೇಶಗಳಲ್ಲಿರುವ ಭಾರತೀಯರ ಕರೆ ತರಲು ಕೇಂದ್ರ ಚಿಂತನೆ : ಮೇ 7 ರಿಂದ ಹಂತ ಹಂತವಾಗಿ ಪ್ರಕ್ರಿಯೆ ಪ್ರಾರಂಭ ಸಾಧ್ಯತೆ?



ನವದೆಹಲಿ (ಕರಾವಳಿ ಟೈಮ್ಸ್) : ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರಸರ್ಕಾರ ಮುಂದಾಗಿದ್ದು, ಈ ಸಂಬಂಧ ಮೇ 7ರಿಂದ ಹಂತ ಹಂತವಾಗಿ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎನ್ನಲಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿರುವ ಭಾರತೀಯರು ತಾವಿರುವ ಸ್ಥಳಗಳಲ್ಲೇ ಬಂಧಿಗಳಾಗಿದ್ದು, ಹೊರಗೆ ಬರಲಾಗದೇ ಪರಿತಪಿಸುತ್ತಿದ್ದಾರೆ. ಪ್ರಮುಖವಾಗಿ ಗಲ್ಫ್ ರಾಷ್ಟ್ರಗಳಲ್ಲಿರುವ ಲಕ್ಷಾಂತರ ಭಾರತೀಯರು ತವರಿಗೆ ಮರಳಲು ತವಕಿಸುತ್ತಿದ್ದು, ಇದೀಗ  ಇವರನ್ನು ಭಾರತಕ್ಕೆ ವಾಪಸ್ ಕರೆತರಲು ಭಾರತ ಸರ್ಕಾರ ಬೃಹತ್ ಯೋಜನೆ ಸಿದ್ದಪಡಿಸುತ್ತಿದೆ. ಮೂಲಗಳ ಪ್ರಕಾರ ಇದೇ ಮೇ 7ರಿಂದ ಕೇಂದ್ರ ಸರ್ಕಾರ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ.

ಸೋಂಕು ವ್ಯಾಪಿಸುವ ಅಪಾಯ ಇರುವುದರಿಂದ ಯಾವ ರೀತಿಯಲ್ಲಿ ಕರೆ ತರಬೇಕೆಂದು ಕಾರ್ಯಾಚರಣೆಯ ಮಾದರಿ (SOP) ರೂಪಿಸಲಾಗಿದೆ. ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತಕ್ಕೆ ಮರಳಬಯಸುವ ವ್ಯಕ್ತಿಗಳ ಪಟ್ಟಿ ತಯಾರಿಸುತ್ತಿವೆ. ವಿಮಾನ  ಹತ್ತುವ ಮುನ್ನ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಯಲಿದೆ. ರೋಗ ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣದ ಅವಕಾಶ ಇರಲಿದೆ. ಆರೋಗ್ಯ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ರೂಪಿಸಿರುವ ಆರೋಗ್ಯ ನಿಯಮಾವಳಿಗಳನ್ನು ಪ್ರತಿಯೊಬ್ಬ ಪ್ರಯಾಣಿಕರೂ  ಪಾಲನೆ ಮಾಡುವುದು ಕಡ್ಡಾಯ. 
ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ವಿದೇಶೀಯರೆಲ್ಲರನ್ನೂ ರಕ್ಷಿಸಲು ಅಮೆರಿಕ ಸೇರಿದಂತೆ ಹಲವು ದೇಶಗಳು ವೈಮಾನಿಕ ತೆರವು ಕಾರ್ಯಾಚರಣೆ ನಡೆದಿದ್ದವು. ಆ ಬಳಿಕ ಭಾರತ ಈಗ ನಡೆಸುತ್ತಿರುವ ತೆರವು ಕಾರ್ಯಾಚರಣೆ ಅತಿ ದೊಡ್ಡದೆನಿಸಿದೆ. ಲಕ್ಷಾಂತರ  ಜನರು ಭಾರತಕ್ಕೆ ವಾಪಸ್ ಬರುವ ನಿರೀಕ್ಷೆ ಇದೆ. ಈ ಹಿಂದೆ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಕರೆತರಲಾಗಿದ್ದ ಭಾರತೀಯರಿಗೆ ಉಚಿತ ವಿಮಾನ ಪ್ರಯಾಣ ಸೇವೆ ನೀಡಲಾಗಿತ್ತು. ಆದರೆ ಈಗ ನಡೆಯುತ್ತಿರುವ ಕಾರ್ಯಾಚರಣೆ ಉಚಿತವಲ್ಲ. ಬದಲಿಗೆ ಪ್ರಯಾಣದ ಶುಲ್ಕವನ್ನು  ಪ್ರಯಾಣಿಕರೇ ಭರಿಸಬೇಕಾಗುತ್ತದೆ.

ನೌಕೆಗಳು, ವಿಮಾನಗಳ ಸಿದ್ಧತೆ


ವಿದೇಶಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ನೌಕೆಗಳನ್ನು ಮತ್ತು ವಿಮಾನಗಳನ್ನು ಸಿದ್ಧಪಡಿಸುತ್ತಿದೆ. ಈ ಹಿಂದೆ ಚೀನಾದ ವುಹಾನ್ ನಿಂದ ಭಾರತೀಯರನ್ನು ಕರೆ ತಂದಿದ್ದ ಇಂಡಿಯನ್ ಏರ್ ಲೈನ್ಸ್ ಇದಕ್ಕಾಗಿ ಸಿದ್ಧತೆ ನಡೆಸಿಕೊಂಡಿದೆ. 

ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ


ಭಾರತಕ್ಕೆ ಮರಳಿದ ಬಳಿಕ ಎಲ್ಲರೂ ಆರೋಗ್ಯ ಸೇತು ಆ್ಯಪ್​ನಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳಬೇಕು. ಇಲ್ಲಿಯೂ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಆ ನಂತರ ಅವರಿರುವ ರಾಜ್ಯದಲ್ಲಿ ಅವರನ್ನೆಲ್ಲಾ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿಡಲಾಗುತ್ತದೆ. ಈ 14 ದಿನಗಳ  ನಂತರ ಕೊರೋನಾ ಪರೀಕ್ಷೆ ನಡೆಸಿ ಆ ಬಳಿಕ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿದೇಶಗಳಿಂದ ಬರುವ ಭಾರತೀಯರ ಪರೀಕ್ಷೆ, ಕ್ವಾರಂಟೈನ್ ಇತ್ಯಾದಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳೇ ಮಾಡಬೇಕೆಂದು ಸೂಚಿಸಲಾಗಿದೆ. ಕೇಂದ್ರ  ವಿದೇಶಾಂಗ ವ್ಯವಹಾರಗಳು ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಸದ್ಯದಲ್ಲೇ ಎಲ್ಲಾ ವಿವರಗಳನ್ನು ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
  • Blogger Comments
  • Facebook Comments

0 comments:

Post a Comment

Item Reviewed: ವಿದೇಶಗಳಲ್ಲಿರುವ ಭಾರತೀಯರ ಕರೆ ತರಲು ಕೇಂದ್ರ ಚಿಂತನೆ : ಮೇ 7 ರಿಂದ ಹಂತ ಹಂತವಾಗಿ ಪ್ರಕ್ರಿಯೆ ಪ್ರಾರಂಭ ಸಾಧ್ಯತೆ? Rating: 5 Reviewed By: karavali Times
Scroll to Top