ಸೂಕ್ತ ವ್ಯವಸ್ಥೆ ಕೈಗೊಳ್ಳುವವರೆಗೂ ಕಾಮವಾರಿ ನಿಲ್ಲಿಸಲು ಸೂಚನೆ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು-ಕಲಾಯಿ ಎಂಬಲ್ಲಿ ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಯಿತ್ತಿರುವ ಹಾಸ್ಟೆಲ್ ಕಾಮಗಾರಿ ಇದೀಗ ಸುರಿಯುತ್ತಿರುವ ಭಾರೀ ಮಳೆಗೆ ಕುಸಿಯುತ್ತಿದ್ದು, ಗಂಭೀರ ಅಪಾಯ ಎದುರಾಗಿರುವ ಸನ್ನಿವೇಶ ನಿರ್ಮಾಣವಾದ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿದ ಪರಿಣಾಮ ಗುರುವಾರ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಮ್ಮುಂಜೆ ಗ್ರಾಮದ ಸರ್ವೆ ನಂಬ್ರ 94/2ಪಿ2 ರಲ್ಲಿನ 1.04 ಎಕ್ರೆ ಜಮೀನು ಜಿ ಶಂಕರ ಶೆಟ್ಟಿ ಎಂಬವರಿಗೆ ಸೇರಿದ ಖಾಸಗಿ ವರ್ಗ ಜಮೀನಾಗಿದ್ದು, ಪಕ್ಕದಲ್ಲಿ ಮಂಗಳೂರು(ಬೈತುರ್ಲಿ)-ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯ ರಸ್ತೆ ಇದೆ. ಇವರ ಖಾಸಗಿ ಜಮೀನು ಹಾಗೂ ರಸ್ತೆ ಮಾರ್ಜಿನ್ ಹೊರತುಪಡಿಸಿ ಇಲ್ಲಿನ ಬೇರೆ ಜಾಗ ಇರುವುದಿಲ್ಲ. ಆದರೂ ಶಂಕರ ಶೆಟ್ಟಿ ಅವರ ಗುಡ್ಡ ಜಮೀನನ್ನು ಅಗೆದು ಹಾಸ್ಟೆಲ್ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಈಗಾಗಲೇ ಶಂಕರ ಶೆಟ್ಟಿ ಅವರು ಕ್ಷೇತ್ರದ ಶಾಸಕರು ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು. ಇವರ ದೂರಿನ ಆಧಾರದಲ್ಲಿ ಸ್ಥಳ ತನಿಖೆ ನಡೆಸಿದ ಇಲಾಖಾ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕಟ್ಟಡ ನಿರ್ಮಾಣದ ಹಿಂದಿನ ಜಾಗ ಗುಡ್ಡವಾಗಿದ್ದು, ಸುಮಾರು 10 ಮೀಟರಿಗಿಂತ ಎತ್ತರದಲ್ಲಿರುವುದರಿಂದ ಕುಸಿತ ಸಾಧ್ಯತೆ ಇದೆ. ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಮಾರ್ಚ್ 24 ರಂದು ಅಲ್ಪಸಂಖ್ಯಾತ ಇಲಾಖೆಗೆ ವರದಿ ಮಾಡಿ ಸೂಚಿಸಿದೆ. ಆದರೂ ಇಲಾಖೆ ಕಾಮಗಾರಿ ನಿಲ್ಲಿಸದೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅವೈಜ್ಞಾನಿಕ ಹಾಗೂ ಅಕ್ರಮ ಕಾಮಗಾರಿಯಿಂದಾಗಿ ಈಗಾಗಲೇ ಕೋಟ್ಯಂತರ ರೂಪಾಯಿ ಸರಕಾರಕ್ಕೆ ನಷ್ಟವಾಗುತ್ತಿದ್ದು, ಇದೀಗ ಭಾರೀ ಮಳೆಯಿಂದಾಗಿ ಕಟ್ಟಡ ನಿರ್ಮಾಣಕ್ಕೆ ಮೊದಲೇ ಅಪಾಯ, ಅವಾಂತರ ಸೃಷ್ಟಿಯಾಗುವ ಮೂಲಕ ಮತ್ತಷ್ಟು ನಷ್ಟ ಸಂಭವಿಸುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ ಎಚ್ಚರಿಸಿತ್ತು. ಪರಿಣಾಮ ಶಾಸಕರು ಸ್ಥಳಕ್ಕೆ ಬಂದು ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಕರೆಸಿ ಮಾಹಿತಿ ಪಡೆದುಕೊಂಡರು. ಅಲ್ಲದೆ ಅಪಾಯಕ್ಕೆ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.
0 comments:
Post a Comment