ಬೆಂಗಳೂರು, ಮಾ. 10, 2021 (ಕರಾವಳಿ ಟೈಮ್ಸ್) : ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದು, ಈ ಬಗ್ಗೆ ರಚನೆ ಮಾಡಿರುವ ಉನ್ನತ ಮಟ್ಟದ ಸಮಿತಿಯನ್ನು ರದ್ದುಗೊಳಿಸಬೇಕು ಮತ್ತು ಪ್ರಬಲ ಜಾತಿಗಳಿಗೆ ಆಯವ್ಯಯದಲ್ಲಿ ನೀಡಿರುವ ಅನುದಾನದ ರೀತಿಯಲ್ಲಿಯೇ ಅತಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಅತಿ ಹಿಂದುಳಿದ ವರ್ಗಗಳ ವೇದಿಕೆಯ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಪ್ರವರ್ಗ 2(ಎ) ನಲ್ಲಿರುವ 102 ಅತಿ ಹಿಂದುಳಿದ ಜಾತಿ ವರ್ಗಗಳು ಒಂದಾಗಿ ಈ ಮನವಿಯನ್ನು ನೀಡುತ್ತಿದ್ದೇವೆ. ಪ್ರವರ್ಗ 2(ಎ)ಗೆ ಸೇರ್ಪಡೆಗೊಳಿಸುವಂತೆ ಹಲವಾರು ಪ್ರಬಲ ಸಮುದಾಯಗಳು ತಮ್ಮ ಬಲಪ್ರದರ್ಶನ ಮಾಡುತ್ತಿವೆ. ಈಗಾಗಲೇ ಪ್ರವರ್ಗ 2(ಎ)ದಲ್ಲಿರುವ ಹಲವಾರು ಅತಿ ಹಿಂದುಳಿದ ಜಾತಿಗಳು ಈ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಆಗಿಲ್ಲ. ಈ ಸಂಧರ್ಭದಲ್ಲಿ ಇನ್ನು ಹೆಚ್ಚಿನ ಜಾತಿಗಳ ಸೇರ್ಪಡೆಯಿಂದಾಗಿ ಈಗಾಗಲೇ ಇರುವ ಜಾತಿಗಳಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರವರ್ಗ 2(ಎ)ದಲ್ಲಿರುವ ಅತಿ ಹಿಂದುಳಿದ ಜಾತಿಗಳ ಅಸ್ತಿತ್ವ ಮತ್ತು ಆಸ್ಮಿತೆ ಕಾಪಾಡುವ ನಿರ್ಧಾರ ತಗೆದುಕೊಳ್ಳುವಂತೆ ಮನವಿ ಮಾಡಿದರು.
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಮಾತನಾಡಿ, ಪ್ರವರ್ಗ 2(ಎ) ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ. ಅಲ್ಲದೆ ಈಗಾಗಲೇ ಸಿದ್ದಗೊಂಡಿರುವ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರವರ್ಗ 2(ಎ)ದಲ್ಲಿರುವ ಜಾತಿಗಳಿಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿದರು.
ವೇದಿಕೆಯ ಗೌರವ ಸಲಹೆಗಾರ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಕಳೆದ ಕೆಲವು ದಿನಗಳಿಂದಲೂ ತಮ್ಮನ್ನು ಪ್ರವರ್ಗ 2(ಎ)ಗೆ ಸೇರಿಸಬೇಕೆಂದು ಸರಕಾರದ ಮೇಲೆ ಒತ್ತಡ ತರುವ ಹೋರಾಟವನ್ನು ಹಮ್ಮಿಕೊಂಡಿರುವ ವೀರಶೈವ ಪಂಚಮಸಾಲಿ ಸಮುದಾಯ ಮತ್ತು ಇವರ ಹಾದಿಯಲ್ಲೇ ಹೊರಟ ಇತರೇ ಪ್ರಭಾವಿ ಸಮುದಾಯಗಳ ಒತ್ತಡವನ್ನು ಗಮನಿಸಿದರೆ ಈ ರಾಜ್ಯದಲ್ಲಿ ನಮ್ಮಂತಹ ಸಣ್ಣ ಪುಟ್ಟ ಸಮುದಾಯಗಳ ಭವಿಷ್ಯ ಅತ್ಯಂತ ಧಾರುಣವಾಗುವ ಸೂಚನೆಗಳು ಕಾಣುತ್ತಿವೆ. ಪ್ರವರ್ಗ 2(ಎ) ನಲ್ಲಿ 15% ಮೀಸಲಾತಿ ಇದ್ದು ಇದನ್ನು 102 ಅತೀ ಹಿಂದುಳಿದ ಸಮುದಾಯಗಳು ಹಂಚಿಕೊಳ್ಳಬೇಕಿದೆ. ಈ 15% ಮೀಸಲಾತಿ ಇನ್ನೂ ಅರ್ದದಷ್ಟು ದ್ವನಿಯೇ ಇಲ್ಲದ ಸಮುದಾಯಗಳಿಗೂ ತಲುಪಿಲ್ಲ. ಆಶ್ಚರ್ಯವೆಂದರೆ ಇಲ್ಲಿನ ಅನೇಕ ಸಮುದಾಯಗಳಿಗೆ ಇಷ್ಟು ದಶಕಗಳಲ್ಲಿ ಒಮ್ಮೆಯೂ ಮೀಸಲಾತಿ ಸೌಲಭ್ಯ ದೊರೆತಿಲ್ಲ. ಇದರ ಬಗ್ಗೆ ತಮ್ಮ ಆಯೋಗ ಜಾತಿವಾರು ಸಮೀಕ್ಷೆಗಾಗಿ ಸಂಗ್ರಹಿಸಿರಬಹುದಾದ ದ್ವಿತೀಯ ಮೂಲದ ಮಾಹಿತಿಯನ್ನು ದಯವಿಟ್ಟು ಗಮನಿಸಬಹುದು ಎಂದರು.
ವೇದಿಕೆಯ ಗೌರವ ಸಲಹೆಗಾರ ಡಾ. ಸಿ.ಎಸ್. ದ್ವಾರಾಕಾನಾಥ್ ಮಾತನಾಡಿ, ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಈಗಿನ ಮೀಸಲಾತಿ ಗೊಂದಲದ ಬಗ್ಗೆ ಮತ್ತೊಂದು “ಉನ್ನತ ಮಟ್ಟದ ಸಮಿತಿ” ಸರಕಾರ ಮಾಡಹೊರಟಿರುವುದು ಅನೈತಿಕ ಮತ್ತು ಅನಾವಶ್ಯಕ. ಈಗಿನ ಮೀಸಲಾತಿ ಗೊಂದಲವನ್ನು ಸದರಿ ಆಯೋಗವೇ ಪರಿಹರಿಸಬೇಕೆಂಬುದು ನಮ್ಮ ಆಶಯ. ಈ ಕಾರಣಕ್ಕೆ ಸದರಿ ಸಮಿತಿಯನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇವೆ. ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಏಕೈಕ ಮಾರ್ಗ ಸರಕಾರದ ಮುಂದಿರುವುದೆಂದರೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಜಾತೀವಾರು ಸಮೀಕ್ಷೆಯನ್ನು ಸ್ವೀಕರಿಸಿ ಸಾರ್ವಜನಿಕವಾಗಿ ಚರ್ಚೆಗೆ ಬಿಟ್ಟು ಆಯೋಗ ನೀಡಿರುವ ಅಂಕಿ ಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ಪಟ್ಟಿಗಳನ್ನು ರೂಪಿಸಬೇಕು ಎಂದು ಹೇಳಿದರು.
ವೇದಿಕೆಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ಇದು ಪ್ರವರ್ಗ 2(ಎ) ನಲ್ಲಿರುವ ಅತಿ ಹಿಂದುಳಿದ, ಅಸಹಾಯಕ, ಅಸಂಘಟಿತ ಜಾತಿಗಳ ಜೀವನ್ಮರಣದ ಪ್ರಶ್ನೆ, ಹಾಗೇನಾದರೂ ಸರಕಾರ ಬಲಿಷ್ಠರ ನ್ಯಾಯಬದ್ದವಲ್ಲದ ಒತ್ತಾಯಕ್ಕೆ ಮಣಿದರೆ ಇದು ತಬ್ಬಲಿ ಸಮುದಾಯಗಳ ಸಾಮೂಹಿಕ ಆತ್ಮಹತ್ಯೆಗೆ ಪ್ರೇರಣೆಯಾಗುತ್ತದೆ ಎಂದು ಅತ್ಯಂತ ನೋವಿನಿಂದ ಹೇಳುತ್ತಿದ್ದೇವೆ. ಬಲಿಷ್ಟರ ಈ ಅನ್ಯಾಯದ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುವ ನಾವು, ವೈಜ್ಞಾನಿಕವಾಗಿ, ನ್ಯಾಯಬದ್ದವಾಗಿ, ಸಾಂಪ್ರದಾಯಿಕವಾಗಿ ನಮಗೆ ದಕ್ಕಿರುವ ಹಕ್ಕು ಗಳಿಗೆ ಚ್ಯುತಿ ಬಾರದಂತೆ ನಮ್ಮ ಸಮುದಾಯಗಳಿಗೆ ರಕ್ಷಣೆ ನೀಡಿ ಸಾಮಾಜಿಕ ನ್ಯಾಯ ದಯಪಾಲಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇವೆ. ಸರಕಾರ ನಮ್ಮ ನೈತಿಕ ಮತ್ತು ನ್ಯಾಯಬದ್ದ ಮನವಿಯನ್ನು ಮಾನ್ಯ ಮಾಡದಿದ್ದರೆ ಪ್ರವರ್ಗ 2(ಎ) ಪಟ್ಟಿಯಲ್ಲಿರುವ ಎಲ್ಲಾ 102 ಜಾತಿವರ್ಗಗಳು ಸಂಘಟಿತವಾಗಿ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಹೇಳಿದರು.
ನಿಯೋಗದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರುಗಳಾದ ಡಾ. ಸಿ.ಎಸ್. ದ್ವಾರಕಾನಾಥ್, ಪೆÇ್ರ. ನರಸಿಂಹಯ್ಯ, ವಿದಾನಪರಿಷತ್ ಸಧಸ್ಯರಾದ ಪಿ.ಆರ್. ರಮೇಶ್, ಕೆ.ಪಿ. ನಂಜುಂಡಿ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಆರ್. ಯಲ್ಲಪ್ಪ, ವೇದಿಕೆಯ ಉಪಾಧ್ಯಕ್ಷ ಡಾ ಜಿ ರಮೇಶ್, ಎಚ್. ಸುಬ್ಬಣ್ಣ, ಸಿ. ನಂಜಪ್ಪ, ಬಿ. ವೆಂಕಟೇಶ್, ಬಸಬರಾಜು ಉಪಸ್ಥಿತರಿದ್ದರು.
ತಮ್ಮನ್ನು ಭೇಟಿಯಾದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಲಿಸಿದರು. ನಂತರ ಮಾತನಾಡಿದ ಅವರು, ಈಗಾಗಲೇ ತಮ್ಮ ಬಜೆಟ್ನಲ್ಲಿ ಘೋಷಣೆ ಮಾಡಿರುವ ಜೊತೆಗೆ ಹಿಂದುಳಿದ ವರ್ಗಗಳಿಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡುವ ಹಾಗೂ ಇನ್ನಿತರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಅತಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಾರ್ಚ್ 24 ರಂದ ಪ್ರವರ್ಗ 2(ಎ) ಗೆ ಸೇರಿಸುವಂತೆ ಮನವಿ ಮಾಡಿರುವ ಹಾಗೂ ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಎಲ್ಲಾ ಜಾತಿಗಳು ಹಾಗೂ ಸಂಘಟನೆಗಳ ಮುಖಂಡರುಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಂವಿಧಾನಾತ್ಮಕವಾದಂತಹ ವರದಿಯನ್ನು ಸರಕಾರಕ್ಕೆ ನೀಡುವ ಭರವಸೆಯನ್ನು £ೀಡಿದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಶಾಸಕರ ಭವನದಲ್ಲಿ ತಮ್ಮನ್ನು ಭೇಟಿಯಾದ ನಿಯೋಗವನ್ನು ಭೇಟಿ ಮಾಡಿ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಗಮನ ಸೆಳೆಯುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವುದಾಗಿ ತಿಳಿಸಿದರು.
0 comments:
Post a Comment