ಮಂಗಳೂರು, ಆಗಸ್ಟ್ 27, 2021 (ಕರಾವಳಿ ಟೈಮ್ಸ್) : ದೂರದ ಓಮನ್ ದೇಶದಲ್ಲಿ ಉದ್ಯೋಗಕ್ಕೆಂದು ತೆರಳಿದ್ದ ಉಳ್ಳಾಲ ಸಮೀಪದ ಇಬ್ಬರು ಯುವಕರು ಅಲ್ಲಿನ ಕಡಲಲ್ಲಿ ವಿಹಾರಕ್ಕೆಂದು ಹೋದವರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಶುಕ್ರವಾರ (ಆಗಸ್ಟ್ 26) ನಡೆದಿದ್ದು ವರದಿಯಾಗಿದೆ.
ಉಳ್ಳಾಲ ಸಮೀಪದ ಅಳೇಕಳ ನಿವಾಸಿ ರಿಝ್ವಾನ್ (25) ಹಾಗೂ ಕೋಡಿ ನಿವಾಸಿ ಝಹೀರ್ (25) ಎಂಬವರೇ ಕಡಲಲ್ಲಿ ಮುಳುಗಿ ಮೃತಪಟ್ಟ ಯುವಕರು. ಓಮಾನ್ ದೇಶದ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದ ಇವರು ಶುಕ್ರವಾರ ಸಂಜೆ ವೇಳೆ ಇಲ್ಲಿನ ಕಡಲ ತೀರಕ್ಕೆ ವಿಹಾರಕ್ಕೆಂದು ತೆರಳಿದ್ದರು ಎನ್ನಲಾಗಿದೆ. ನೀರಿಗಿಳಿದ ರಿಝ್ವಾನ್ ಮೊದಲು ನೀರಿನ ಸೆಳೆತಕ್ಕೆ ಸಿಲುಕಿದ್ದು, ಬಳಿಕ ಆತನನ್ನು ರಕ್ಷಿಸಲು ತೆರಳಿದ ಝಹೀರ್ ಕೂಡಾ ಸೆಳೆತಕ್ಕೆ ಸಿಲುಕಿ ಇಬ್ಬರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಝಹೀರ್ ಮೃತದೇಹ ನಿನ್ನೆಯೇ ಪತ್ತೆಯಾಗಿದ್ದು, ರಿಝ್ವಾನ್ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.
ಮೃತ ಝಹೀರಿಗೆ ಈಗಾಗಲೇ ವಿವಾಹ ನಿಶ್ಚಯವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಊರಿಗೆ ಮರಳುವ ಸಿದ್ದತೆಯಲ್ಲಿದ್ದ ಎನ್ನಲಾಗಿದ್ದು, ಇಬ್ಬರು ಯುವಕರು ವಿದೇಶದಲ್ಲಿ ಮೃತಪಟ್ಟಿರುವುದು ಉಳ್ಳಾಲ ಪರಿಸರವನ್ನು ಶೋಕತಪ್ತವಾಗಿಸಿದೆ.
0 comments:
Post a Comment