ಬೆಳ್ತಂಗಡಿ, ಎಪ್ರಿಲ್ 01, 2022 (ಕರಾವಳಿ ಟೈಮ್ಸ್) : ಅನ್ಯ ಜಾತಿಯ ಹುಡುಗಿಯನ್ನು ವಿವಾಹವಾದುದನ್ನು ವಿರೋಧಿಸಿದ ತಂದೆಯನ್ನೇ ಕೊಲೆ ಮಾಡಿದ ಆರೋಪಿ ಮಗ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ನಿವಾಸಿ ಹರೀಶ್ ಪೂಜಾರಿ(29) ಎಂಬಾತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.
ಕಳೆದ 2021 ರ ಜನವರಿ 18 ರಂದು ಆರೋಪಿ ಹರೀಶ ಪೂಜಾರಿ ಅನ್ಯ ಜಾತಿಯ ಹುಡುಗಿಯ ವಿವಾಹವಾದ ಬಗ್ಗೆ ತಂದೆ ಶ್ರೀಧರ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ದ್ವೇಷದಿಂದ ಗಲಾಟೆ ನಡೆಸಿ ಮರದ ಪಕ್ಕಾಸಿನ ತುಂಡಿನಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದನು.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಸಹೋದರ ದಿನೇಶ ಎಂಬವರು ನೀಡಿದ ದೂರಿನಂತೆ ಪಿಎಸ್ಸೈ ನಂದಕುಮಾರ್ ಎಂ ಎಂ ಅವರು ಪ್ರಕರಣ ದಾಖಲಿಸಿಕೊಂಡು, ಬೆಳ್ತಂಗಡಿ ಸಿಪಿಐ ಸಂದೇಶ್ ಪಿ ಜಿ ರವರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೆ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಲ್ಲವಿ ಬಿ ಆರ್ ಅವರು ಶುಕ್ರವಾರ (ಎಪ್ರಿಲ್ 1, 2022) ಆರೋಪಿ ಹರೀಶ ಪೂಜಾರಿ ದೋಷಿ ಎಂದು ತೀರ್ಪು ನೀಡಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10,000/- ರೂಪಾಯಿ ದಂಢವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ್ ವಾದಿಸಿದ್ದರು.
0 comments:
Post a Comment