ಬಂಟ್ವಾಳ, ಎಪ್ರಿಲ್ 19, 2024 (ಕರಾವಳಿ ಟೈಮ್ಸ್) : ಮನೆಯಿಂದ ನದಿಗೆ ಬದಿಗೆ ರಸ್ತೆ ನಿರ್ಮಿಸಿ ಮರಳು ಕಳವುಗೈಯಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ಮನೆ ಮಾಲಿಕ ಹಾಗೂ ಇತರರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು, ಬಾಳ್ತಿಲ ಗ್ರಾಮದ ಸಣ್ಣಕುಕ್ಕು ಸೇನೆರೆಕೋಡಿ ಎಂಬಲ್ಲಿ ಆರೋಪಿಗಳಾದ ರವಿಶಂಕರ್ ಹಾಗೂ ಇತರರು ನೇತ್ರಾವತಿ ನದಿಯಿಂದ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಎರಡು-ಮೂರು ಮಂದಿ ಓಡಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಸದ್ರಿ ಜಾಗವು ರವಿಶಂಕರ್ ಎಂಬವರಿಗೆ ಸೇರಿದ್ದಾಗಿದ್ದು, ಅವರು ತನ್ನ ಜಮೀನಿನಿಂದ ನೇತ್ರಾವತಿ ನದಿ ಬದಿಗೆ ರಸ್ತೆ ನಿರ್ಮಿಸಿರುವುದು ಕಂಡು ಬಂದಿದೆ. ಸದ್ರಿ ರಸ್ತೆಯನ್ನು ನೇತ್ರಾವತಿ ನದಿಯಿಂದ ಮರಳು ಕಳ್ಳತನ ಮಾಡಿ ತೆಗೆಯುವ ಸಲುವಾಗಿ ನಿರ್ಮಿಸಿರುವುದು ಗೊತ್ತಾಗಿರುವ ಹಿನ್ನಲೆಯಲ್ಲಿ ನದಿಯಿಂದ ಕಳ್ಳತನದಿಂದ ಮರಳು ತೆಗೆಯಲು ಪ್ರಯತ್ನಿಸಿದ ಆರೋಪದಲ್ಲಿ ರವಿಶಂಕರ್ ಮತ್ತು ಇತರರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment