ಉಪ್ಪಿನಂಗಡಿ, ಮೇ 10, 2025 (ಕರಾವಳಿ ಟೈಮ್ಸ್) : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಚಿಕ್ಕಪ್ಪನ ಮಗನೇ ಹೊಡೆದು ಕೊಂದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಶರತ್ ಕುಮಾರ್ (34) ಎಂದು ಹೆಸರಿಸಲಾಗಿದ್ದು, ಕೊಲೆ ಆರೋಪಿಯನ್ನು ಹರಿಪ್ರಸಾದ್ ಎಂದು ಹೆಸರಿಸಲಾಗಿದೆ. ಶರತ್ ಕುಮಾರಗೂ ಆತನ ಚಿಕ್ಕಪ್ಪನ ಮನೆಯವರಿಗೂ ಕೆಲ ದಿನಗಳಿಂದ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆಯಾಗುತ್ತಿದ್ದು, ಗುರುವಾರವೂ ಈ ಬಗ್ಗೆ ಗಲಾಟೆಯಾಗಿರುತ್ತದೆ. ಇದರ ಮುಂದುವರಿದ ಭಾಗವಾಗಿ ಶುಕ್ರವಾರ ರಾತ್ರಿ ಸುಮಾರು 8-8.30ರ ವೇಳೆಗೆ ಶರತ್ ಕುಮಾರ್ ಮಾದೇರಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಯ ಅಂಗಳಕ್ಕೆ ಹೋಗಿ ಅಂಗಳದಲ್ಲಿ ನಿಂತು ಚಿಕ್ಕಪ್ಪನ ಮಗ ಸತೀಶನಿಗೆ ಬೈಯುತ್ತಿದ್ದಾಗ ತೋಟದಲ್ಲಿದ್ದ ಹರಿಪ್ರಸಾದ್ ಬಂದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ ಕುಮಾರನ ತಲೆಗೆ ಹೊಡೆದಿದ್ದಾನೆ. ಹಲ್ಲೆಯಿಂದ ಅಂಗಳದಲ್ಲೇ ಕುಸಿದು ಬಿದ್ದ ಶರತ್ ಕುಮಾರನ ತಲೆಗೆ ಮತ್ತೆ ಬಲವಾಗಿ ಹಲ್ಲೆ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ಮೃತನ ಸಹೋದರ ಚರಣ್ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment