ಬಂಟ್ವಾಳ, ಮೇ 15, 2025 (ಕರಾವಳಿ ಟೈಮ್ಸ್) : ಕೆಂಪು ಕಲ್ಲು ಸಾಗಾಟದ ಲಾರಿ ಹಾಗೂ ಡಾಮರು ಮಿಶ್ರಿತ ಜಲ್ಲಿಕಲ್ಲು ಸಾಗಾಟದ ಟಿಪ್ಪರ್ ಲಾರಿಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕೆಂಪು ಕಲ್ಲು ಸಾಗಾಟದ ಲಾರಿ ಚಾಲಕ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಗುರುವಾರ ಸಂಭವಿಸಿದೆ.
ಮೃತ ಲಾರಿ ಚಾಲಕನನ್ನು ಸಜಿಪ ಸಮೀಪದ ಗೋಳಿಪಡ್ಪು ನಿವಾಸಿ ರಫೀಕ್ (45) ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಕ್ಲೀನರ್ ಯೂಸುಫ್, ಇನ್ನೊಂದು ಲಾರಿ ಚಾಲಕ ರಿಜ್ವಾನ್ ಹಾಗೂ ನಿರ್ವಾಹಕ ಅಲ್ಪಾಸ್ ಎಂದು ಹೆಸರಿಸಲಾಗಿದೆ.
ಕಂಚಿನಡ್ಕಪದವು ಕಡೆಯಿಂದ ಸಜಿಪನಡು ಕಡೆಗೆ ಹೋಗುತ್ತಿದ್ದ ವೇಳೆ ಕೆಂಪು ಕಲ್ಲುಗಳನ್ನು ಸಾಗಿಸುವ ಲಾರಿಗೆ ಹಿಂಬದಿಯಿಂದ ಬರುತ್ತಿದ್ದ ಡಾಮರು ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡು ಲಾರಿಗಳು ರಸ್ತೆ ಬದಿಯ ಅಡಿಕೆ ತೋಟಕ್ಕೆ ಉರುಳಿ ಬಿದ್ದಿದೆ. ಟಿಪ್ಪರ್ ಲಾರಿಯಲ್ಲಿದ್ದ ಬಿಸಿಯಾದ ಡಾಮರು ಮಿಶ್ರಿತ ಜಲ್ಲಿ ಕಲ್ಲುಗಳು ಕೆಂಪು ಕಲ್ಲು ಸಾಗಿಸುವ ಲಾರಿ ಚಾಲಕನ ಮೈ ಮೇಲೆ ಬಿದ್ದು ಬೆಂದು ಹೋಗಿದ್ದು, ತಕ್ಷಣ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಮೇಲೆಯೂ ಡಾಮರು ಬಿದ್ದಿದ್ದು ಆತನಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment