ಬಂಟ್ವಾಳ, ಜೂನ್ 19, 2025 (ಕರಾವಳಿ ಟೈಮ್ಸ್) : ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತೆರಳಿ ಇಬ್ಬರ ಸಾವಿನಲ್ಲಿ ಪರ್ಯಾವಸಾನಗೊಂಡ ಘಟನೆ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತರ ಪತಿ-ಪತ್ನಿಯರನ್ನು ಇಲ್ಲಿನ ನಿವಾಸಿ ತಿಮ್ಮಪ್ಪ ರಾಮ ಮೂಲ್ಯ (52) ಹಾಗೂ ಜಯಂತಿ (45) ಎಂದು ಹೆಸರಿಸಲಾಗಿದೆ. ಬುಧವಾರ ರಾತ್ರಿ 11 ಗಂಟೆಯಿಂದ ಗುರುವಾರ ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ಗಂಡ-ಹೆಂಡತಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವಿಕೋಪಕ್ಕೆ ತಿರುಗಿದ್ದು, ಹೆಂಡತಿ ಜಯಂತಿ ಅವರಿಗೆ ಗಂಡ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಿರುತ್ತಾರೆ. ಬಳಿಕ ಗಂಡ ತಿಮ್ಮಪ್ಪ ಕೂಡಾ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಜಯಂತಿ ಅವರ ಸಹೋದರಿ ಫರಂಗಿಪೇಟೆ ನಿವಾಸಿ ಸುಜಾತ ಹಾಗೂ ತಿಮ್ಮಪ್ಪ ಅವರ ಸಹೋದರ ಸಜಿಪಮೂಡ ನಿವಾಸಿ ವಿಶ್ವನಾಥ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment