ಬಂಟ್ವಾಳ, ಜೂನ್ 11, 2025 (ಕರಾವಳಿ ಟೈಮ್ಸ್) : ಕೃಷಿಕರೊಂದಿಗೆ ಅಡಿಕೆ ವ್ಯಾಪಾರ ನಡೆಸಿ ಲಕ್ಷಾಂತರ ರೂಪಾಯಿ ಹಣ ನೀಡದೆ ಆರೋಪಿ ಅಂಗಡಿ, ಮನೆಗೆ ಬೀಗ ಹಾಕಿ ಪರಾರಿಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾದ ಆರೋಪಿಯನ್ನು ನಾವೂರು ಗ್ರಾಮದ ಮೈಂದಾಳ ನಿವಾಸಿ, ಬಂಟ್ವಾಳ-ಬಿ ಕಸ್ಬಾ ಗ್ರಾಮದ ಬಡ್ಡಕಟ್ಟೆ ಜೀವನ ಜ್ಯೋತಿ ಬಿಲ್ಡಿಂಗಿನಲ್ಲಿಎ ಬಿ ಸುಪಾರಿ ಅಂಗಡಿ ಮಾಲಕ ನೌಫಲ್ ಮುಹಮ್ಮದ್ ಎಂದು ಹೆಸರಿಸಲಾಗಿದೆ.
ಈ ಬಗ್ಗೆ ನಾವೂರು ಗ್ರಾಮದ ನಿವಾಸಿ ಪ್ರವೀಣ್ ಡಿ ಸೋಜಾ (45) ಎಂಬವರು ಅಧಿಕೃತವಾಗಿ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರು ಕೃಷಿಕನಾಗಿ ಕೆಲಸ ಮಾಡಿಕೊಂಡಿದ್ದು, ತಾನು ಬೆಳೆಸಿದ ಅಡಿಕೆಯನ್ನು ಆರೋಪಿತನಾದ ನೌಫಲ್ ಮಹಮ್ಮದ್ ಎಂಬವರ ಬಂಟ್ವಾಳ ತಾಲೂಕು ಬಿ ಕಸ್ಬಾ ಗ್ರಾಮದ ಬಡ್ಡಕಟ್ಟೆ ಜೀವನ ಜ್ಯೋತಿ ಬಿಲ್ಡಿಂಗ್ ನಲ್ಲಿ ಎ ಬಿ ಸುಪಾರಿ ಅಂಗಡಿಗೆ ಮಾರಾಟ ಮಾಡುತ್ತಿರುವುದಾಗಿದೆ. ಸದ್ರಿ ಆರೋಪಿತನು ಅಡಿಕೆ ಮಾರಾಟ ಮಾಡಿದಾಗ ಸ್ವಲ್ಪ ಹಣವನ್ನು ಕೊಡುತ್ತಿದ್ದು, ಬಳಿಕ ಸ್ವಲ ದಿನಗಳ ನಂತರ ಹಣವನ್ನು ಕೊಡುತ್ತಿರುವುದಾಗಿದೆ. ಅದೇ ರೀತಿ ಮಾರ್ಚ್ 8 ರಂದು ಬೆಳಿಗ್ಗೆ ಪ್ರವೀಣ್ ಅವರು ನೌಫಲ್ ಮಹಮ್ಮದ್ ಅವರ ಅಂಗಡಿಗೆ ವಾಹನದಲ್ಲಿ ಹೋಗಿ ಸುಮಾರು 6.5 ಕ್ವಿಂಟಾಲ್ ಅಡಿಕೆಯನ್ನು ಮಾರಾಟ ಮಾಡಿದ ಸುಮಾರು 3.50 ಲಕ್ಷ ರೂಪಾಯಿ ಹಣವನ್ನು ಪ್ರವೀಣ್ ಅವರಿಗೆ ಕೊಟ್ಟಿರುವುದಿಲ್ಲ. ಜೂನ್ 9 ರಂದು ರಾತ್ರಿ ಆರೋಪಿ ನೌಫಲ್ ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್ ಕಳುಹಿಸಿರುತ್ತಾನೆ. ಇದರಿಂದ ಗಾಬರಿಗೊಂಡ ಪ್ರವೀಣ್ ಅವರು ಜೂನ್ 10 ರಂದು ಬೆಳಿಗ್ಗೆ ಆರೋಪಿತನ ಅಂಗಡಿಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು, ಮನೆಗೂ ಬೀಗ ಹಾಕಿರುವುದಾಗಿದೆ. ಆರೋಪಿಯ ಮೊಬೈಲ್ ಕೂಡಾ ಸ್ವಿಚ್ಡ್ ಆಪ್ ಆಗಿದೆ. ಆರೋಪಿತನೊಂದಿಗೆ ಅಡಿಕೆ ವ್ಯಾಪಾರ ಮಾಡಿ, ಹಣ ಪಡೆಯಲು ಬಾಕಿಯಿದ್ದ ಇತರೆ 24 ಜನರು ಕೂಡಾ ಸ್ಥಳಕ್ಕಾಗಮಿಸಿದ್ದಾರೆ. ಆರೋಪಿತನು ತನ್ನೊಂದಿಗೆ ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಟ್ಟು 94,77,810/- ರೂಪಾಯಿ ಹಣ ನೀಡದೆ ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆ ಮಾಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾನೆ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2025 ಕಲಂ 316(2) 318(4) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರಯ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment