ಶಾಂತಿ-ಸುವ್ಯವಸ್ಥಿತೆಗೆ ಸವಾಲೆಸೆದು ಸಾಮಾಜಿಕ ಜಾಲ ತಾಣಗಳಲ್ಲಿ ವಿಕೃತಿ ಮೆರೆದ 5 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ ದಕ್ಷಿಣ ಕನ್ನಡ ಪೊಲೀಸರು - Karavali Times ಶಾಂತಿ-ಸುವ್ಯವಸ್ಥಿತೆಗೆ ಸವಾಲೆಸೆದು ಸಾಮಾಜಿಕ ಜಾಲ ತಾಣಗಳಲ್ಲಿ ವಿಕೃತಿ ಮೆರೆದ 5 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ ದಕ್ಷಿಣ ಕನ್ನಡ ಪೊಲೀಸರು - Karavali Times

728x90

4 June 2025

ಶಾಂತಿ-ಸುವ್ಯವಸ್ಥಿತೆಗೆ ಸವಾಲೆಸೆದು ಸಾಮಾಜಿಕ ಜಾಲ ತಾಣಗಳಲ್ಲಿ ವಿಕೃತಿ ಮೆರೆದ 5 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ ದಕ್ಷಿಣ ಕನ್ನಡ ಪೊಲೀಸರು

ಮಂಗಳೂರು, ಜೂನ್ 04, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡಲು ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿ, ಸಮಾಜದ ಶಾಂತಿ ನೆಮ್ಮದಿಗೆ ಅಪಾಯವುಂಟು ಮಾಡುವ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವ್ಯಕ್ತಿಗಳ ಪತ್ತೆಗಾಗಿ ಮಂಗಳೂರು ನಗರ ಕಮಿಷನರೇಟ್ ವ್ತಾಪ್ತಿಯಿಂದ ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ತನಿಖೆ ನಡೆಸಲಾಗಿ ಐದು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು 5 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 

ಉಡುಪಿ ಜಿಲ್ಲೆಯ ಹೆಜಮಾಡಿ-ಎಸ ಎಸ್ ರೋಡ್ ಗ್ರೀನ್ ಹೌಸ್ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅವರ ಪುತ್ರ ಮೊಹಮ್ಮದ್ ಅಸ್ಲಾಂ (23) ಎಂಬಾತ ಸೌದಿ ಅರೇಬಿಯಾದಿಂದ “ಟೀಂ ಜೋಕರ್ಝ್” ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 88/2025 ಕಲಂ 192, 353 (2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ಮೊಹಮ್ಮದ್ ಅಸ್ಲಾಂ ಎಂಬಾತನ ವಿರುದ್ದ ಎಲ್ ಒ ಸಿ ಹೊರಡಿಸಿ, ಪೊಲೀಸರು ದಸ್ತಗಿರಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.

ಮಂಗಳೂರು ತಾಲೂಕು, ಇಡ್ಯಾ ಗ್ರಾಮದ ಸುರತ್ಕಲ್-ಕಾಟಿಪಳ್ಳ ಸಮೀಪದ 3ನೇ ಬ್ಲಾಕ್ ಆಶ್ರಯ ಕಾಲೊನಿ ನಿವಾಸಿ ನಾಗರಾಜು ಬಂಗೇರ ಎಂಬವರ ಪುತ್ರ ಚೇತನ್ (20) ಹಾಗೂ ಹಳೆಯಂಗಡಿ ಚೇಳ್ಯಾರ್-ಖಂಡಿಗ-ಪಾಡಿ ನಿವಾಸಿ ಯೋಗೀಶ್ ಅಡಪ ಅವರ ಪುತ್ರ ನಿತಿನ್ ಅಡಪ (23) ಎಂಬವರು ಮುಸ್ಲಿಂ ಹೆಸರಿನ  ಸಿಮ್ ಕಾರ್ಡ್ ಬಳಸಿಕೊಂಡು “ಟೀಂ ಕರ್ಣ ಸುರತ್ಕಲ್” ಎಂಬ ಇನ್ಸ್ಟಾಗ್ರಾಂ ಫೇಜ್ ತೆರೆದಿದ್ದು, ಸದ್ರಿ ಪೇಜಿನಲ್ಲಿ ಚೆನ್ನಪ್ಪ @ ಮುತ್ತು  ಸುರತ್ಕಲ್ ಎಂಬಾತನು ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 58/2025 ಕಲಂ 196(1), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಚೇತನ್ ಮತ್ತು ನಿತಿನ್ ಅಡಪ ಎಂಬವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಫರಂಗಿಪೇಟೆ ಸಮೀಪದ ಅರ್ಕುಳ-ಕೊಪ್ಪಳ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ರಿಯಾಝ್ ಇಬ್ರಾಹಿಂ (30) ಎಂಬಾತನು ಸೌದಿ ಅರೇಬಿಯಾದಿಂದ “ಬ್ಯಾರಿ ರೋಯಲ್ ನವಾಬ್” ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2025 ಕಲಂ 353(2) ಭಾರತೀಯ ನ್ಯಾಯ ಸಂಹಿತೆ ಮತ್ತು ಮುಲ್ಕಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2025 ಕಲಂ 353(1)(ಸಿ), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದಲ್ಲಿ ಆರೋಪಿ ರಿಯಾಝ್ ಇಬ್ರಾಹಿಂ ಎಂಬಾತನ ವಿರುದ್ದ ಎಲ್ ಒ ಸಿ ಹೊರಡಿಸಿ, ದಸ್ತಗಿರಿ ಮಾಡಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ. 

ಮಂಗಳೂರು-ಕಸಬಾ ಬೆಂಗ್ರೆ, ಖಿಳ್‍ರಿಯಾ ಮಸೀದಿ ಬಳಿ ನಿವಾಸಿ ದಿವಂಗತ ಮೊಹಮ್ಮದ್ ಮುಸ್ತಫಾ ಎಂಬವರ ಪುತ್ರ ಜಮಾಲ್ ಝಾಕೀರ್ (21) ಎಂಬಾತನು “ಟ್ರೋಲ್ ಬೆಂಗ್ರೆ ರೊ ಮಕ್ಕ” ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2025 ಕಲಂ 353(1)(ಸಿ), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದಲ್ಲಿ ಜಮಾಲ್ ಝಾಕೀರ್ ಎಂಬಾತನನ್ನು ದಸ್ತಗಿರಿ ಮಾಡಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಹಳೆಯಂಗಡಿ-ಕೊಳವೈಲು ನಿವಾಸಿ ಗುರು ಪ್ರಸಾದ್ ಎಂಬಾತನು “ಗುರು ಡಿಪ್ರಸಾದ್ ಹಳೆಯಂಗಡಿ” ಎಂಬ ಫೇಸ್ ಬುಕ್ ಖಾತೆಯ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2025 ಕಲಂ 196(1),(ಎ),353(2),79,56 ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗುರು ಪ್ರಸಾದ್ ಎಂಬಾತನನ್ನು ದಸ್ತಗಿರಿ ಮಾಡಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ ಗೋಯಲ್ ಹಾಗೂ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ, ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿರವರ ವಿಶೇಷ ತಂಡದ ಸಿಬ್ಬಂದಿಗಳು ಸದ್ರಿ ಪ್ರಕರಣಗಳ ತನಿಖೆ ಮುಂದುವರೆಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಧರ್ಮಗಳ ನಡುವೆ ವಿದ್ವೇಷ ಉಂಟು ಮಾಡುವ, ಸಾಮಾಜಿಕ ಶಾಂತಿಯನ್ನು ಹಾಳುಮಾಡುವ ಪೋಸ್ಟ್ ಗಳು ನಿರಂತರವಾಗಿ ಕಂಡು ಬರುತ್ತಿದ್ದು, ಈ ಬಗ್ಗೆ ಪರಿಶೀಲನೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಈಗಾಗಲೇ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಕೆಲವರು ಹಿಟ್ ಲಿಸ್ಟ್ ನಲ್ಲಿದ್ದಾರೆ. ಎಲ್ಲರನ್ನೂ ಬಂಧಿಸಲಾಗುವುದು. ವಿದೇಶದಲ್ಲಿದ್ದರೂ ಅಂತಹವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಚಾರಣೆಗೆ ಒಂದಷ್ಟು ಸಮಯ ತಗಲುತ್ತದೆ ಅಷ್ಟೆ. ಯಾರೂ ಕೂಡಾ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಸಾಮಾಜಿಕ ಜಾಲ ತಾಣಗಳನ್ನು ಒಳ್ಳೆಯದಕ್ಕೆ, ಇನ್ನೊಬ್ಬರಿಗೆ ಉಪಕಾರವಾಗುವಂತಹ ಕೆಲಸಗಳಿಗೆ ಬಳಸಿಕೊಳ್ಳಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಶಾಂತಿ-ಸುವ್ಯವಸ್ಥಿತೆಗೆ ಸವಾಲೆಸೆದು ಸಾಮಾಜಿಕ ಜಾಲ ತಾಣಗಳಲ್ಲಿ ವಿಕೃತಿ ಮೆರೆದ 5 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ ದಕ್ಷಿಣ ಕನ್ನಡ ಪೊಲೀಸರು Rating: 5 Reviewed By: karavali Times
Scroll to Top