ಮಂಗಳೂರು, ಜೂನ್ 19, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಬಹು ಸಂಸ್ಕ್ರತಿಯ ಪ್ರತಿಬಿಂಬವಾಗಿ ನಡೆಸುವ ಕರಾವಳಿ ಉತ್ಸವವನ್ನು ಪ್ರತಿವರ್ಷವೂ ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಕಳೆದ ವರ್ಷದ ಉತ್ಸವದಿಂದ ಉಳಿಕೆಯಾದ ಮೊತ್ತವನ್ನು ಕಾಯ್ದಿರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು.
ಡೀಸಿ ವರ್ಗಾವಣೆ ಹಿನ್ನೆಲೆಯಲ್ಲಿ ಬೀಳ್ಕೊಡುಗೆಯ ಶುಭಾಶಯ ಸಲ್ಲಿಸಿದ ಕೊಂಕಣಿ, ಬ್ಯಾರಿ, ತುಳು ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರ ಜೊತೆಗೆ ಅಭಿಪ್ರಾಯ ಹಂಚಿಕೊಂಡ ಅವರು ಕಳೆದ ಸಾಲಿನ ಕರಾವಳಿ ಉತ್ಸವದಲ್ಲಿ 1.20 ಕೋಟಿ ರೂಪಾಯಿ ಉಳಿತಾಯವಾಗಿದೆ, ಮುಂದಿನ ಕರಾವಳಿ ಉತ್ಸವ ನಡೆಸುವವರಿಗೆ ಯಾವುದೇ ಆರ್ಥಿಕ ಹೊರೆಯಾಗದು, ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕು. ಇದೇ ವೇಳೆ ಕರಾವಳಿ ಉತ್ಸವ ಮೈದಾನದ ಒಂದು ಪಾರ್ಶ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅದರ ಆದಾಯದ ಅರ್ಧ ಭಾಗವನ್ನು ಕರಾವಳಿ ಉತ್ಸವ ಹಾಗೂ ಇನ್ನರ್ಧ ಭಾಗವನ್ನು ಮಂಗಳಾ ಕ್ರೀಡಾಂಗಣದ ನಿರ್ವಹಣೆಗೆ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸುವಂತೆ ಮುಲ್ಲೈ ಮುಹಿಲನ್ ಸಲಹೆ ನೀಡಿದರು.
ಹಳೆ ಜಿಲ್ಲಾಧಿಕಾರಿಗಳ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ರೂಪಿಸಿ ಕಲೆ, ಸಂಸ್ಕ್ರತಿಯ ಚಟುವಟಿಕೆಯ ಕೇಂದ್ರವಾಗಿ ರೂಪಿಸುವ ಬಗ್ಗೆ ಈಗಾಗಲೇ ಚಿಂತಿಸಲಾಗಿದ್ದು, ಈ ಯೋಜನೆಗೆ ಅಕಾಡೆಮಿಗಳು ಹಾಗೂ ಕಲಾವಿದರು ಪೂರಕವಾಗಿ ಸ್ಪಂದಿಸಬೇಕು ಎಂದು ಮುಹಿಲನ್ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳನ್ನು ತುಳು, ಕೊಂಕಣಿ, ಬ್ಯಾರಿ ಭಾಷೆಯ ಪುಸ್ತಕ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್ ಉಪಸ್ಥಿತರಿದ್ದರು.
0 comments:
Post a Comment