ಬಂಟ್ವಾಳ, ಜೂನ್ 22, 2025 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದ ದೇರಾಜೆಯಲ್ಲಿ ಶುಕ್ರವಾರ ರಾತ್ರಿ ನಡೆದ “ತಲವಾರು” ಗೊಂದಲಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸಿದ ವೆಬ್ ಸೈಟ್ ನ್ಯೂಸ್ ಚಾನೆಲ್ ಲಿಂಕ್ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ ಟಿವಿ ಕನ್ನಡ ಎಂಬ ನ್ಯೂಸ್ ಚಾನಲ್ ಲಿಂಕ್ ನಲ್ಲಿ “ದ ಕ ಜಿಲ್ಲೆಯಲ್ಲಿ ಮತ್ತೆ ಮುಂದುವರಿದ ತಲವಾರು ದಾಳಿ, ಸಜೀಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ” ಎಂಬ ತಲೆಬರಹವಿರುವ ನ್ಯೂಸ್ ಲಿಂಕ್ ಮೂಲಕ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿರುವುದು ಕಂಡು ಬಂದಿರುತ್ತದೆ. ಸದ್ರಿ ಸುಳ್ಳು ಸುದ್ದಿ ಪ್ರಸಾರದಿಂದ ಸಾರ್ವಜನಿಕರಿಗೆ ಭಯ ಬೀತಿಯನ್ನುಂಟು ಮಾಡಿ, ಸಾರ್ವಜನಿಕ ನೆಮ್ಮದಿಯ ವಿರುದ್ದ ಅಪರಾಧವೆಸಗಿದ ಸದ್ರಿ ನ್ಯೂಸ್ ಚಾನಲ್ ವಿರುದ್ದ ನ್ಯಾಯಾಲಯದಿಂದ ಅನುಮತಿ ಪಡೆದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2025, ಕಲಂ 240 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಹಮ್ಮದ್ ನೌಶಾದ್ ಎಂಬ ಹೆಸರಿನ ಪೇಸ್ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಹಿನ್ನಲೆಯಲ್ಲಿ, ಸದ್ರಿ ಪೇಸ್ಬುಕ್ ಖಾತೆಯ ವಿರುದ್ದವೂ ನ್ಯಾಯಾಲಯದಿಂದ ಅನುಮತಿ ಪಡೆದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025, ಕಲಂ 240 ಬಿ ಎನ್ ಎಸ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment