ಬಂಟ್ವಾಳ, ಜೂನ್ 11, 2025 (ಕರಾವಳಿ ಟೈಮ್ಸ್) : ಜುಗಾರಿ ಅಡ್ಡೆಗೆ ದಾಳಿ ನಡೆಸಿ ಬಳಿಕ ಆರೋಪಿಗಳೊಂದಿಗೆ ಮಧ್ಯವರ್ತಿ ಮೂಲಕ ಡೀಲ್ ಕುದುರಿಸಲು ಯತ್ನಿಸಿದ ಆರೋಪದ ಮೇರೆ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ಕೌಶಿಕ್ ಬಿ ಸಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 8 ರಂದು ನಡೆದ ಜುಗಾರಿ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪಿಎಸ್ಸೈ ಕೌಶಿಕ್ ಬಿ ಸಿ ಅವರು ದಾಳಿ ಮಾಡಿದ್ದು, ಈ ಸಂದರ್ಭ ಘಟನಾ ಸ್ಥಳದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗಿರಲಿಲ್ಲ. ಸ್ಥಳದಲ್ಲಿ ಮೋಟಾರು ಸೈಕಲ್ ಕಂಡು ಬಂದಿತ್ತು. ಪಿ ಎಸ್ ಐ ಕೌಶಿಕ್ ಅವರು ಈ ಬಗ್ಗೆ ಕಾನೂನಾತ್ಮಕ ಕ್ರಮ ಜರುಗಿಸದೇ ಬೈಕ್ ಮಾಲಕನಿಗೆ ಕರೆಮಾಡಿ ಠಾಣೆಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಬೈಕ್ ಮಾಲಿಕನಿಗೆ ಮೂರನೇ ವ್ಯಕ್ತಿಯ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಯ ಮೇಲೆ ಮೇ 12 ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment