ಮಂಗಳೂರು, ಜೂನ್ 07, 2025 (ಕರಾವಳಿ ಟೈಮ್ಸ್) : ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಜೂನ್ 4 ರಂದು ಬಂದಿದ್ದ ಹುಸಿ ಬಾಂಬ್ ಕರೆ ಪ್ರಕರಣವನ್ನು ಬೇಧಿಸಿರುವ ಮಂಗಳೂರು ನಗರ ಪೊಲೀಸರು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೇ ಪ್ರಕರಣದ ಆರೋಪಿ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಬಂಧಿತ ಆರೋಪಿಯನ್ನು ಇಲ್ಲಿನ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ ಶ್ರೀಮತಿ ಚಲಸಾನಿ ಮೋನಿಕಾ ಚೌಧರಿ ಎಂದು ಹೆಸರಿಸಲಾಗಿದೆ. ಈಕೆ ಕಾಲೇಜಿನಲ್ಲಿ ನಡೆಯಬೇಕಾಗಿದ್ದ ಸೆಮಿನಾರ್ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳಲು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಜೂನ್ 4 ರಂದು ಬೆಳಿಗ್ಗೆ 8.45ಕ್ಕೆ ದೇರಳಕಟ್ಟೆ-ನಾಟೆಕಲ್ ರಸ್ತೆಯಲ್ಲಿರುವ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಆಸ್ಪತ್ರೆಗೆ ಬಾಂಬ್ ಇಡಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆ ಖಾಲಿ ಮಾಡಬೇಕು ಎಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಕರೆ ಹಿನ್ನಲೆಯಲ್ಲಿ ತೀವ್ರ ಭಯ ಹಾಗೂ ಆತಂಕ ಉಂಟಾಗಿದ್ದ ನಿಟ್ಟಿನಲ್ಲಿ ಸುಮಾರು 25-30 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಆಗಮಿಸಿ ಆಸ್ಪತ್ರೆಯ ಆವರಣದಾದ್ಯಂತ, ಮುಖ್ಯ ಕಟ್ಟಡ ಮತ್ತು ಪಾರ್ಕಿಂಗ್ ಪ್ರದೇಶಗಳುಲ್ಲಿ ಸುಮಾರು 10 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಯಾವುದೇ ಸ್ಫೋಟಕಗಳು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಕೊನೆಗೆ ಇದೊಂದು ಹುಸಿ ಕರೆ ಎಂಬುದು ದೃಢಪಟ್ಟ ಹಿನ್ನಲೆಯಲ್ಲಿ ವಾಪಾಸು ತೆರಳಿದ ಪೊಲೀಸರು ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ತನಿಖೆ ಕೈಗೊಂಡಿದ್ದರು.
ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದವರು ಆರೋಪಿ ಪತ್ತೆಗೆ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ದೂರು ನೀಡಿದ ವಿದ್ಯಾರ್ಥಿನಿಯೇ ಆರೋಪಿ ಎಂಬುದು ತಿಳಿದು ಬಂದಿದೆ.
ಆರೋಪಿ ವಿದ್ಯಾರ್ಥಿನಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದು, ಜೂನ್ 4 ರಂದು ಸೆಮಿನಾರ್ ನೀಡಬೇಕಾಗಿತ್ತು. ಈ ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಳೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಆಕೆಯ ಹೇಳಿಕೆ ಮೇಲೆ ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಮಂಗಳೂರು ನಗರ ಪೆÇಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment