ಮಂಗಳೂರು, ಜೂನ್ 06, 2025 (ಕರಾವಳಿ ಟೈಮ್ಸ್) : ಕೆಲವೇ ಮಂದಿ ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಲಾಭಕ್ಕಾಗಿ ಇಡೀ ಕರಾವಳಿ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪರಿಣಾಮವಾಗಿ ಎರಡೂ ಸಮುದಾಯದಲ್ಲಿನ ಅಮಾಯಕರು ಕೊಲೆಯಾಗುತ್ತಿದ್ದಾರೆ.
ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಮತ್ತು ಆಸ್ತಿ ಮಾಡಿಕೊಳ್ಳುತ್ತಿರುವ ಕೆಲವೇ ಮಂದಿ ಇದಕ್ಕೆ ನೇರ ಹೊಣೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಕರಾವಳಿಯಲ್ಲಿ ತೀವ್ರಗೊಂಡಿರುವ ಮತೀಯ ಹಿಂಸೆ, ದ್ವೇಷ ಭಾಷಣ, ಹತ್ಯೆಗಳಿಂದ ಉಂಟಾಗಿರುವ ಗಂಭೀರ ಸ್ಥಿತಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಮಂಗಳೂರಿಗೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿ ಮಾತನಾಡಿದ ಅವರು, ಇಂತಹ ವ್ಯಕ್ತಿಗಳ ಕುರಿತು ಹಿಂದೂ ಧರ್ಮದ ಜನರು ತಡವಾದರೂ ಪರವಾಗಿಲ್ಲ, ಈಗ ಎಚ್ಚೆತ್ತುಕೊಳ್ಳಲೇಬೇಕಾಗಿದೆ. ಅಮಾಯಕ ಹಿಂದೂಗಳ ಸಾವು, ನೋವು, ಅನಾರೋಗ್ಯ, ಬಡತನ, ಶಿಕ್ಷಣ, ಉದ್ಯೋಗದ ಸಮಸ್ಯೆಗಳ ಕುರಿತು ಈ ವ್ಯಕ್ತಿಗಳು ಮಾತೇ ಆಡುವುದಿಲ್ಲ. ಯಾವುದೋ ಕಾರಣಕ್ಕೆ ಒಂದು ದುರ್ಘಟನೆ ನಡೆದರೆ ಆ ತಕ್ಷಣವೇ ರಕ್ತಪಿಪಾಸುಗಳಂತೆ ಕರಾವಳಿ ಪ್ರದೇಶಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಾರೆ. ಅಂತಹವರನ್ನು ಜನರು ತಿರಸ್ಕರಿಸುವ ಕೆಲಸ ಮಾಡದೇ ಇದ್ದರೆ ಇಲ್ಲಿನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದರು.
ಹಿಂದೂ-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚಲು ತೆರೆಯ ಹಿಂದೆ ಸೂತ್ರಧಾರಿಗಳಾಗಿ ಕೆಲಸ ಮಾಡುವ ಪ್ರಭಾವಿಗಳಿಗೆ ಈವರೆಗೆ ಯಾವ ತೊಂದರೆಯೂ ಆಗಿಲ್ಲ. ಅವರೆಲ್ಲರೂ ಸಾಮ್ರಾಜ್ಯ ಕಟ್ಟಿಕೊಂಡು ಆರಾಮದಿಂದ ಇದ್ದಾರೆ. ಬಡವರ ಮಕ್ಕಳು, ಶೋಷಿತ ಸಮುದಾಯಗಳ ಮಕ್ಕಳು ಅಂಥಹವರ ಮಾತು ನಂಬಿ ಧರ್ಮ ರಕ್ಷಣೆ ಹೆಸರಿನಲ್ಲಿ ಕತ್ತಿ ಹಿಡಿದು ಜಗಳವಾಡಿ ಸಾಯುತ್ತಿದ್ದಾರೆ. ಈ ಬಗ್ಗೆ ಹಿಂದೂ ಸಮಾಜದ ಜನರೇ ಚಿಂತಿಸಬೇಕಾದ ಕಾಲ ಕೂಡಿಬಂದಿದೆ ಎಂದ ಹರಿಪ್ರಸಾದ್ ಅವರು, ಮತೀಯ ದ್ವೇಷದ ಪ್ರಕರಣಗಳಲ್ಲಿ ಕೊಲೆಯಾದ ಎಲ್ಲರ ಮನೆಗಳ ಬಗ್ಗೆಯೂ ಒಮ್ಮೆ ಅಧ್ಯಯನ ನಡೆಸಬೇಕು. ಶೇಕಡ 95ಕ್ಕಿಂತಲೂ ಹೆಚ್ಚು ಮಂದಿಯ ಕುಟುಂಬಗಳು ನರಕ ಯಾತನೆಯಲ್ಲಿ ಜೀವನ ನಡೆಸುತ್ತಿವೆ. ಹೊಟ್ಟೆ, ಬಟ್ಟೆಗೂ ಇಲ್ಲದ ಪರಿಸ್ಥಿತಿ ಇದೆ. ಅವರನ್ನು ಹಿಂಸೆಗೆ ದೂಡಿದವರು ಐಷಾರಾಮಿ ಜೀವನ ನಡೆಸುತ್ತಾ ಈಗಲೂ ಪ್ರಚೋದನೆ ನೀಡುವ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅಂತಹವರನ್ನು ಪತ್ತೆಮಾಡಿ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
0 comments:
Post a Comment