ಬಂಟ್ವಾಳ, ಜೂನ್ 06, 2025 (ಕರಾವಳಿ ಟೈಮ್ಸ್) : ಬಕ್ರೀದ್ ಹಬ್ಬ ಆಚರಣೆಯು ಸಂಪೂರ್ಣವಾಗಿ ಇಸ್ಲಾಮೀ ಚೌಕಟ್ಟಿನಲ್ಲಿರುವಂತೆ ಸರ್ವರೂ ನೋಡಿಕೊಳ್ಳಬೇಕು. ಅದರಲ್ಲೂ ಯುವ ಸಮೂಹ ತಮ್ಮ ವರ್ತನೆ, ನಡೆ-ನುಡಿಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಮುನ್ನಡೆಯುವಂತೆ ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್ ಹಾಜ್ ಶೈಖುನಾ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಕರೆ ನೀಡಿದರು.
ಶುಕ್ರವಾರ ಅರಫಾ ದಿನ ಪ್ರಯುಕ್ತ ಜುಮಾ ನಮಾಝ್ ಬಳಿಕ ಸಂದೇಶ ನೀಡಿದ ಅವರು, ಶನಿವಾರ ಕರಾವಳಿ ಜಿಲ್ಲೆಗಳಲ್ಲಿ ಬಕ್ರೀದ್ ಹಬ್ಬದ ಆಚರಣೆ ನಡೆಯಲಿದೆ. ಹಬ್ಬ ಆಚರಣೆಗೆ ಪವಿತ್ರ ಇಸ್ಲಾಂ ಅದರದ್ದೇ ಆದ ಇತಿ-ಮಿತಿಗಳನ್ನು, ಚೌಕಟ್ಟನ್ನು ಹಾಕಿ ಕೊಟ್ಟಿದ್ದು, ಅದರಂತೆ ಆಚರಿಸಬೇಕು ಹೊರತು ಯಾವುದೇ ಕಾರಣಕ್ಕೂ ಇತರರಿಗೆ ತೊಂದರೆಯಾಗುವಂತೆ ಇರಕೂಡದು ಎಂದರು.
ಹಬ್ಬ ಆಚರಣೆಯಲ್ಲಿ ಆರಾಧನಾ ಕರ್ಮಗಳಿಗೆ ಪ್ರಾಧಾನ್ಯತೆ ನೀಡಬೇಕೇ ಹೊರತು, ಆಡಂಬರ, ಅನಿಸ್ಲಾಮಿಕ ಕಾರ್ಯಕ್ರಮಗಳಿಗೆ ಪೂರ್ಣ ವಿರಾಮ ಹಾಕಬೇಕಾಗಿದೆ. ಯುವ ಸಮೂಹವಂತೂ ಕಾನೂನು ಮೀರಿ ಯಾವುದೇ ವರ್ತನೆಗಳಾಗಲೀ, ನಡೆ-ನುಡಿಗಳು ಬರದಂತೆ ಜಾಗರೂಕರಾಗಿರಬೇಕು. ವಾಹನಗಳಲ್ಲಿ ಸಂಚರಿಸುವ ವೇಳೆಯೂ ಕಾನೂನು ಇತಿ-ಮಿತಿಗಳನ್ನು ಪಾಲಿಸಬೇಕು. ಕಾನೂನು ರಕ್ಷಕರೊಂದಿಗೆ ಸಂಪೂರ್ಣವಾಗಿ ಸಹಕರಿಸಿಕೊಂಡೇ ಮುಸ್ಲಿಂ ಸಮುದಾಯ ಹಬ್ಬ ಆಚರಣೆ ನಡೆಸಬೇಕು. ಈಗಾಗಲೇ ಪೊಲೀಸ್ ಇಲಾಖೆ ಶಾಂತಿ ಸಭೆಗಳನ್ನು ನಡೆಸಿ ಮಸೀದಿ-ಮದ್ರಸಗಳ ಪ್ರಮುಖರಿಗೆ ಸಲಹೆ-ಸೂಚನೆಗಳನ್ನು ನೀಡಿದ್ದು, ಅದನ್ನು ಪ್ರತಿ ಮೊಹಲ್ಲಾದ ಪ್ರತಿಯೊಬ್ಬ ಮುಸ್ಲಿಮರೂ ಪಾಲಿಸುವ ಮೂಲಕ ನಾಡಿನ ಶಾಂತಿ-ಸುವ್ಯವಸ್ಥೆ, ಸುಭಿಕ್ಷೆಗೆ ಸಹಕಾರ ಆಗುವಂತೆ ವರ್ತಿಸಬೇಕು ಎಂದ ಬಿ ಎಚ್ ಉಸ್ತಾದ್ ತ್ಯಾಗ, ಬಲಿದಾನದ ಸಂಕೇತವಾಗಿರುವ ಈದುಲ್ ಅಳ್ಹಾ ಹಬ್ಬ ಸರ್ವರಿಗೂ ಒಳಿತನ್ನೇ ಉಂಟು ಮಾಡಲಿ ಎಂದು ಶುಭ ಹಾರೈಸಿದರು.
0 comments:
Post a Comment