ಅಭಿಮಾನಿಗಳ ಸುದೀರ್ಘ 18 ವರ್ಷಗಳ ನಿರೀಕ್ಷೆಗೆ ಕೊನೆಗೂ ತಕ್ಕ ಫಲ ನೀಡಿದ ಆರ್.ಸಿ.ಬಿ. ತಂಡ : ಇಂದು ಸಂಜೆ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಗಾಗಿ ವಿಜಯೋತ್ಸವ ಮೆರವಣಿಗೆ - Karavali Times ಅಭಿಮಾನಿಗಳ ಸುದೀರ್ಘ 18 ವರ್ಷಗಳ ನಿರೀಕ್ಷೆಗೆ ಕೊನೆಗೂ ತಕ್ಕ ಫಲ ನೀಡಿದ ಆರ್.ಸಿ.ಬಿ. ತಂಡ : ಇಂದು ಸಂಜೆ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಗಾಗಿ ವಿಜಯೋತ್ಸವ ಮೆರವಣಿಗೆ - Karavali Times

728x90

3 June 2025

ಅಭಿಮಾನಿಗಳ ಸುದೀರ್ಘ 18 ವರ್ಷಗಳ ನಿರೀಕ್ಷೆಗೆ ಕೊನೆಗೂ ತಕ್ಕ ಫಲ ನೀಡಿದ ಆರ್.ಸಿ.ಬಿ. ತಂಡ : ಇಂದು ಸಂಜೆ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಗಾಗಿ ವಿಜಯೋತ್ಸವ ಮೆರವಣಿಗೆ

ಬೆಂಗಳೂರು, ಜೂನ್ 04, 2025 (ಕರಾವಳಿ ಟೈಮ್ಸ್) : ಕೋಟ್ಯಾಂತರ ಅಭಿಮಾನಿಗಳ ಸುದೀರ್ಘ ವರ್ಷಗಳ ವನವಾಸ ಕೊನೆಗೂ ಅಂತ್ಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡ 18 ವರ್ಷಗಳ ಬಳಿಕ ಪ್ರಥಮ ಬಾರಿಗೆ ವಿಶ್ವದ ಶ್ರೀಮಂತ ಚುಟುಕು ಕ್ರಿಕೆಟ್ ಸಮರ “ಐಪಿಎಲ್” ಟ್ರೋಫಿಗೆ ಮುತ್ತಿಕ್ಕಿದೆ. ಜೂನ್ 3 ರಂದು ರಾತ್ರಿ ಗುಜರಾತಿನ ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕೂಟದ ಫೈನಲ್ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ ವಿರೋಚಿತ 6 ರನ್ ಗಳ ಜಯಗಳಿಸಿ ಈ ಸಾಧನೆ ಮಾಡಿದೆ. 

ಐಪಿಎಲ್ ಇತಿಹಾಸದ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ನೆಲದಲ್ಲಿ ಅಭಿಮಾನಿ ದೇವರುಗಳಿಗಾಗಿ ವಿಜಯೋತ್ಸವದ ಮೆರವಣಿಗೆಯನ್ನು ಘೋಷಿಸಿದೆ. ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಲು ಈ ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.

ಬುಧವಾರ (ಜೂನ್ 4) ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಆರ್ ಸಿ ಬಿ ವಿಜಯೋತ್ಸವದ ಮೆರವಣಿಗೆ ನಡೆಯಲಿದೆ. ಈ ವಿಜಯೋತ್ಸವ ಮೆರವಣಿಗೆ ವಿಧಾನಸೌಧದಿಂದ ಆರಂಭವಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಮಾಪ್ತಿಗೊಳ್ಳಲಿದೆ. ಚಾಂಪಿಯನ್ ತಂಡದ ಆಟಗಾರರನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದ್ದು, ವಿಜಯೋತ್ಸವ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗುವ ನಿರೀಕ್ಷೆಗಳಿವೆ.

ಈ ಬಗ್ಗೆ ಸ್ವತಃ ಆರ್ ಸಿ ಬಿ ಫ್ರಾಂಚೈಸಿ ಸಾಮಾಜಿಕ ಜಾಲ ತಾಣದ ಪೇಜಿನಲ್ಲಿ ಹೇಳಿಕೊಂಡಿದ್ದು, “ಇದು ಆರ್‍ಸಿಬಿಯ ವಿಜಯೋತ್ಸವ ಪರೇಡ್. ಇದು ನಿಮಗಾಗಿ, 12ನೇ ಮ್ಯಾನ್ ಆರ್ಮಿ ಎಂದು ಅಭಿಮಾನಿಗಳನ್ನು ಉಲ್ಲೇಖಿಸಲಾಗಿದ್ದು, ಆರ್‍ಸಿಬಿ ಸೋಲಿನಲ್ಲಿ ಮತ್ತು ಗೆಲುವಿನಲ್ಲೂ ಪ್ರತಿ ಭಾರಿ ಬೆಂಬಲವಾಗಿ ನಿಂತ ನಿಷ್ಠಾವಂತ ಅಭಿಮಾನಿಗಳೇ ಈ ಗೆಲುವಿನ ಕಿರೀಟ ನಿಮ್ಮದೇ” ಎಂದು ಹೇಳಿದೆ.

ವಿಜಯೋತ್ಸವ ಮೆರವಣಿಗೆಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‍ವರ್ಕ್‍ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಜೊತೆಗೆ, ಜಿಯೋ ಹಾಟ್ ಸ್ಟಾರ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕವೂ ವೀಕ್ಷಿಸುವ ಅವಕಾಶವಿದೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ಆರ್ ಸಿ ಬಿ ತಂಡ ಅಹಮದಾಬಾದ್ ನಿಂದ ಹೊರಟಿದ್ದು, ಮಧ್ಯಾಹ್ನ 1:30ಕ್ಕೆ ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣ ತಲುಪಲಿದೆ. ಸಂಜೆ 4-5 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಮತ್ತು ಡಿಸಿಎಂ ಭೇಟಿಯಾಗಲಿದೆ. ಸಂಜೆ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತೆರೆದ ಬಸ್ಸಿನಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.


 

  • Blogger Comments
  • Facebook Comments

0 comments:

Post a Comment

Item Reviewed: ಅಭಿಮಾನಿಗಳ ಸುದೀರ್ಘ 18 ವರ್ಷಗಳ ನಿರೀಕ್ಷೆಗೆ ಕೊನೆಗೂ ತಕ್ಕ ಫಲ ನೀಡಿದ ಆರ್.ಸಿ.ಬಿ. ತಂಡ : ಇಂದು ಸಂಜೆ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಗಾಗಿ ವಿಜಯೋತ್ಸವ ಮೆರವಣಿಗೆ Rating: 5 Reviewed By: karavali Times