ಪುತ್ತೂರು, ಜುಲೈ 06, 2025 (ಕರಾವಳಿ ಟೈಮ್ಸ್) : ಅಪ್ರಾಪ್ತ ಬಾಲಕ-ಬಾಲಕಿಯರಿಬ್ಬರು ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟದಲ್ಲಿ ಕುಳಿತುಕೊಂಡಿದ್ದಾಗ ಅವರನ್ನು ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕಿರುಕುಳ ನೀಡಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ದುಷ್ಕರ್ಮಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಪುತ್ತೂರು-ಆರ್ಯಾಪು ನಿವಾಸಿ ರಾಮಚಂದ್ರ (38) ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಅಪ್ರಾಪ್ತ ಬಾಲಕನ ತಂದೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಮಗ ಬೈಕಿನಲ್ಲಿ ಶನಿವಾರ ಮಧ್ಯಾಹ್ನ ಆತನ ಪರಿಚಯದ ಬಾಲಕಿಯೊಂದಿಗೆ ಬೀರಮಲೆ ಬೆಟ್ಟದಲ್ಲಿ ಕುಳಿತುಕೊಂಡಿದ್ದಾಗ, ಆರೋಪಿಗಳು ಬಾಲಕ-ಬಾಲಕಿ ಇಬ್ಬರನ್ನೂ ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿರುವುದಲ್ಲದೆ, ಬಾಲಕ-ಬಾಲಕಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಬಾಲಕನನ್ನು ಅನ್ಯ ಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿರುತ್ತಾರೆ. ನಂತರ ಆರೋಪಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಇನ್ ಸ್ಟ್ರಾಗ್ರಾಮಿನಲ್ಲಿ ಹರಿಯಬಿಟ್ಟು, ಬಾಲಕನನ್ನು ಅನ್ಯ ಧರ್ಮದವನೆಂದು ಸದ್ರಿ ವೀಡಿಯೋದಲ್ಲಿ ಹೇಳಿರುತ್ತಾರೆ.
ಘಟನೆಯ ಮೂಲಕ ಕೋಮು ಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟಾಗಲು ಪ್ರಚೋದನೆ ಮಾಡಿದ ಆರೋಪಿಗಳ ವಿರುದ್ದ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2025, ಕಲಂ 126(2), 352, 351(2), 353(1)(ಅ), 57, 196(1)(ಎ) ಜೊತೆಗೆ 3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸದ್ರಿ ಪ್ರಕರಣದ ಸಂತ್ರಸ್ಥರಿಬ್ಬರೂ ಅಪ್ರಾಪ್ತರಾಗಿರುವುದರಿಂದ, ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾ ಎಸ್ಪಿ ಸೂಚಿಸಿದ್ದಾರೆ.
0 comments:
Post a Comment