ಹಬ್ಬ-ಹರಿದಿನಗಳ ಭದ್ರತೆಗೆ ಮಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಶರತ್ತುಗಳು - Karavali Times ಹಬ್ಬ-ಹರಿದಿನಗಳ ಭದ್ರತೆಗೆ ಮಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಶರತ್ತುಗಳು - Karavali Times

728x90

3 July 2025

ಹಬ್ಬ-ಹರಿದಿನಗಳ ಭದ್ರತೆಗೆ ಮಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಶರತ್ತುಗಳು

ಮಂಗಳೂರು, ಜುಲೈ 03, 2025 (ಕರಾವಳಿ ಟೈಮ್ಸ್) : ಮುಂಬರುವ ಹಬ್ಬ-ಹರಿದಿನಗಳ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ಆಚರಣೆಗಾಗಿ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ. 

ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ, ಮಂಗಳೂರು ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಜುಲೈ 6 ರಂದು ಮೊಹರಂ, ಆಗಸ್ಟ್ 8 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ, ಆಗಸ್ಟ್ 27 ರಂದು ಗಣೇಶ ಚತುರ್ಥಿ, ಸೆಪ್ಟೆಂಬರ್ 6 ರಂದು ಈದ್ ಮಿಲಾದ್, ಸೆ 22 ರಿಂದ ನವರಾತ್ರಿ ಮೊದಲಾದ ಹಬ್ಬಗಳ ಸಂಬಂಧ, ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. 

ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಎಲ್ಲ ಆಯೋಜಕರು ಈ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಹಬ್ಬದ ಮುಂಚಿತವಾಗಿ ನಿಖರವಾದ ಮಾರ್ಗಸೂಚಿಗಳನ್ನು (ರಸ್ತೆ, ಸಮಯ, ಧ್ವನಿ ನಿಯಂತ್ರಣ) ಹೊರಡಿಸಲಾಗುತ್ತದೆ. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಷರತ್ತುಗಳ ಉಲ್ಲಂಘನೆ ಅಥವಾ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರಲಿದೆ.

ಕಡ್ಡಾಯ ಪೊಲೀಸ್ ಅನುಮತಿ ಮತ್ತು ಸಮಯದ ನಿರ್ಬಂಧ ಪಾಲನೆ : ಪೊಲೀಸ್ ಹಾಗೂ ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಯ ನಂತರ ಯಾವುದೇ ಮೆರವಣಿಗೆಯನ್ನು ನಡೆಸಲು ಅನುಮತಿಸಲಾಗದು. ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲೀಕರಿಂದ ನಿರಾಕ್ಷೇಪಣಾ ಪತ್ರ’ (ಎನ್ ಒ ಸಿ) ಪಡೆದು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅನುಮೋದಿತ ಸ್ಥಳ ಅಥವಾ ಮಾರ್ಗದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಯಾವುದೇ ವ್ಯತಿರಿಕ್ತತೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ನಿಯಮ ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತ 2023 ರ ಕಲಂ 189 (ಕಾನೂನುಬಾಹಿರ ಕೂಟ) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 92(1) (ಸಾರ್ವಜನಿಕ ಶಾಂತಿಯ ಉಲ್ಲಂಘನೆ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಡಿಜೆ ಸಂಪೂರ್ಣ ನಿಷೇಧ : ಧ್ವನಿವರ್ಧಕಗಳಿಗೆ ಅನುಮತಿ ಅಗತ್ಯ : ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯುವುದು ಅಗತ್ಯವಿದೆ ಮತ್ತು ರಾತ್ರಿ 10 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಟ್ಟಗಳು ಈ ಮಿತಿಗಳ ಒಳಗಿರಬೇಕು : ವಾಣಿಜ್ಯ ಪ್ರದೇಶ - 65 ಡೆಸಿಬಲ್, ವಾಸಸ್ಥಳ - 55 ಡೆಸಿಬಲ್, ನಿಶ್ಯಬ್ದ ವಲಯ - 50 ಡೆಸಿಬಲ್.

ನಿಯಮ ಉಲ್ಲಂಘನೆಗಾಗಿ ಕಲಂ 270 ಮತ್ತು ಕಲಂ 223 ಭಾರತೀಯ ನ್ಯಾಯ ಸಂಹಿತೆ 2023 (ಸಾರ್ವಜನಿಕ ಉಪದ್ರವ ಮತ್ತು ಆದೇಶಕ್ಕೆ ಅವಿಧೇಯತೆ), ಪರಿಸರ ಸಂರಕ್ಷಣಾ ಕಾಯ್ದೆ 1986 ರ ಕಲಂ 15, ಶಬ್ದ ಮಾಲಿನ್ಯ ನಿಯಮಗಳು 2000, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 31 ಮತ್ತು ಸ್ಫೋಟಕಗಳ ಕಾಯ್ದೆ 1884 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

24*7 ಭದ್ರತೆ ಮತ್ತು ಸಿಸಿಟಿವಿ ಕಡ್ಡಾಯ : ಆಯೋಜಕರು ಸ್ಥಳದಲ್ಲಿ 24*7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು.

ನಿಯಮ ಉಲ್ಲಂಘನೆಗಾಗಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 31, 34, 70 ಮತ್ತು ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕ್ರಮಗಳು (ಕ್ರಮಗಳು) ಕಾಯ್ದೆ, 2017 ರ ಕಲಂ 3(1) ಮತ್ತು 6 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಧಾರ್ಮಿಕ ವಿರೋಧಿ ಘೋಷಣೆಗಳು ಮತ್ತು ದ್ವೇಷ ಭಾಷಣ ದ್ವೇಷ ನಿಷೇಧ (ಮುದ್ರಣ ಮತ್ತು ಸಾಮಾಜಿಕ ಮಾಧ್ಯಮದಲ್ಲಿ) : ಯಾವುದೆ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸೋಷಿಯಲ್ ಮೀಡಿಯಾ ಪೊಸ್ಟ್‍ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿರಬಾರದು.

ಉಲ್ಲಂಘನೆಗಾಗಿ ಕಲಂ:196 (ದ್ವೇಷಭಾವನೆ ಉಂಟುಮಾಡುವುದು), 299 (ಧಾರ್ಮಿಕ ನಂಬಿಕೆಗೆ ಅಪಮಾನ), 352/353 (ಸಾರ್ವಜನಿಕ ಕೇಡು) ಬಿ ಎನ್ ಎಸ್ 2023 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ಜನಸಂದಣಿಗೆ ಕಡ್ಡಾಯ ಸ್ವಯಂ ಸೇವಕರ ನೇಮಕಾತಿ : ಅನುಮತಿತ ಸಾಮರ್ಥ್ಯ ಮೀರದಂತೆ ಜನಸಮೂಹ ನಿಯಂತ್ರಿಸಬೇಕು. ಸಮರ್ಪಕವಾಗಿ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು.

ಉಲ್ಲಂಘನೆಗಾಗಿ ಕಲಂ: 125 ಬಿ ಎನ್ ಎಸ್ 2023 (ಇತರರ ದೈಹಿಕ ಸುರಕ್ಷತೆಗೆ ಅಪಾಯ), ಕಲಂ 92 ಮತ್ತು ಕಲಂ 30 ಕರ್ನಾಟಕ ಪೊಲೀಸ್ ಕಾಯ್ದೆ 963 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಪೆಂಡಾಲ್ ಎತ್ತರ ನಿಯಮಗಳು ಮತ್ತು ವಾಹನ ಸುರಕ್ಷಾ ನಿಯಮ ಪಾಲನೆ : ಪೆಂಡಾಲು, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳು ಇತ್ಯಾದಿಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು. ವಾಹನಗಳು ನೋಂದಣಿ ಪತ್ರ, ದೃಢತೆ ಪ್ರಮಾಣಪತ್ರ, ವಿಮೆ ಮತ್ತು ಪಿಯುಸಿ ಪ್ರಮಾಣ ಪತ್ರ ಹೊಂದಿರಬೇಕು.

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 125 ಹಾಗೂ ಮೋಟಾರು ವಾಹನ ಕಾಯ್ದೆ 2019 ರ ಕಲಂ 39, 130, 192 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಅಗ್ನಿಶಾಮಕ ಮತ್ತು ತುರ್ತು ವ್ಯವಸ್ಥೆಗಳ ಒದಗಿಕೆ : ಅಗ್ನಿ ನಂದಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿವೆ. ಬೆಂಕಿಯ ಮೂಲಗಳ ಬಳಿಯಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಇರಿಸಬಾರದು. ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು, ಏಕ ಬಳಕೆ ಪ್ಲಾಸ್ಟಿಕ್ ನಿಷೇದಿಸಿದೆ.

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 125, 287 ಮತ್ತು ಪರಿಸರ ಕಾಯ್ದೆ 1986 ರ ಕಲಂ 15, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು 2016 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ವಾಹನ ಸಂಚಾರ ಮುಕ್ತವಾಗಿ ನಿರ್ವಹಣೆ ಮತ್ತು ತುರ್ತು ಮಾರ್ಗಗಳ ನಿರ್ಬಂಧ :  ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡ ಉಂಟುಮಾಡಬಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 126(2), 285, 194ಇ ಮತ್ತು ಮೋಟಾರು ವಾಹನ ಕಾಯ್ದೆ 2019 ರ ಕಲಂ 122, 201 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕ/ ಖಾಸಗಿ ಆಸ್ತಿಗೆ ಹಾನಿ ಮಾಡಬಾರದು : ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟುಮಾಡಬಾರದು. 

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 117/118, 324/326 ಮತ್ತು ಕರ್ನಾಟಕ ಸಾರ್ವಜನಿಕ ಆಸ್ತಿ ಹಾನಿ ತಡ ಕಾಯ್ದೆ 1984 ರ ಕಲಂ 3 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ಸಮಯ, ಕಾರ್ಯಕ್ರಮ ವಿವರ ಮತ್ತು ಪೊಲೀಸ್ ಸೂಚನೆ ಪಾಲನೆ : ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪೆÇಲೀಸ್ ಸೂಚನೆಗಳನ್ನು ಪಾಲಿಸಬೇಕು.

ಉಲ್ಲಂಘನೆಗಾಗಿ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 92 ಮತ್ತು ಬಿ ಎನ್ ಎಸ್ 2023 ರ ಕಲಂ 221 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಮಹಿಳೆಯರ ಸುರಕ್ಷತೆಗೆ ಶೂನ್ಯ ಸಂಹಿತೆ ನೀತಿ : ಕಾರ್ಯಕ್ರಮದ ಸಮಯ ಮಹಿಳೆಯರ ಚುಡಾವಣೆ, ಹಿಂಬಾಲಿಸುವಿಕೆ, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತೆ ನೋಡಿಕೊಳ್ಳಬೇಕು.

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 74, 75, 77, 78 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ಸ್ವಚ್ಛತೆ, ಪ್ಲೆಕ್ಸ್ ಮತ್ತು ಬ್ಯಾನರ್ ನಿಯಂತ್ರಣ : ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.

ಉಲ್ಲಂಘನೆಗಾಗಿ ಕರ್ನಾಟಕ ತೆರೆದ ಸ್ಥಳ (ಅಲಂಕಾರ ತಡೆಯುವಿಕೆ) ಕಾಯ್ದೆ 1981 ಬಿ ಎನ್ ಎಸ್ 2023 ರ ಕಲಂ 196, ಪರಿಸರ ಕಾಯ್ದೆ 1986 ರ ಕಲಂ: 15 ಮತ್ತು ಎಂಸಿಸಿ ಕಸ ನಿರ್ವಹಣಾ ನಿಬಂಧನೆಗಳಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದ. 

ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿಯಾದ ವಸ್ತುಗಳ ನಿಷೇಧ : ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.

ಉಲ್ಲಂಘನೆಗಾಗಿ ಶಸ್ತ್ರಾಸ್ತ್ರ ಕಾಯ್ದೆ 1959 ರ ಕಲಂ 25 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಡೋನ್ ಬಳಸಲು ಮುಂಚಿತ ಅನುಮತಿ ಕಡ್ಡಾಯ : ಮುಂಚಿತ ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ ಗಿಂಗಿ ಬಳಸುವುದು ನಿಷಿದ್ಧ.

ಉಲ್ಲಂಘನೆಗಾಗಿ ಡ್ರೋನ್ ನಿಯಮಗಳು 2021 ರ ನಿಯಮ 49 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಮೆರವಣಿಗೆಯಲ್ಲಿ ಪ್ರಾಣಿಗಳ ಬಳಕೆಗೆ ನಿಯಂತ್ರಣ : ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯ.

ಉಲ್ಲಂಘನೆಗಾಗಿ ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ 11 ಮತ್ತು 22 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ಪೊಲೀಸ್ ತಪಾಸಣೆಗೆ ಅಡ್ಡಿ ಮಾಡುವುದು ನಿಷೇಧ : ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು.

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 221 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ಅನುಮಾನಾಸ್ಪದ ಚಟುವಟಿಕೆಗಳ ವರದಿ ನೀಡುವುದು ಕಡ್ಡಾಯ : ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ, ಸುಳ್ಳು ಮಾಹಿತಿ ಅಥವಾ ಗಲಭೆಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆಮಾಡಿ ವರದಿ ಮಾಡಬೇಕು.

ಉಲ್ಲಂಘನೆಗಾಗಿ ಬಿ ಎನ್ ಎಸ್ 2023 ರ ಕಲಂ 217 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 

ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986, ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಶಸ್ತ್ರಾಸ್ತ್ರ ಕಾಯ್ದೆ 1959, ಡೋನ್ ನಿಯಮಗಳು 2021, ಸ್ಫೋಟಕಗಳ ಕಾಯ್ದೆ 1884 ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹಬ್ಬ-ಹರಿದಿನಗಳ ಭದ್ರತೆಗೆ ಮಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಶರತ್ತುಗಳು Rating: 5 Reviewed By: karavali Times
Scroll to Top