ಧರ್ಮಸ್ಥಳ, ಆಗಸ್ಟ್ 06, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 39/2025 ಕಲಂ 211 (ಎ) ಬಿ ಎನ್ ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಜುಲೈ 19 ರಂದು ವಿಶೇಷ ತನಿಖಾ ತಂಡ (ಎಸ್ ಐ ಟಿ) ತಂಡಕ್ಕೆ ವರ್ಗಾಯಿಸಲಾಗಿರುತ್ತದೆ. ಇದರ ಹೊರತಾಗಿ ಈವರೆಗೆ ಎಸ್.ಐ.ಟಿ ತಂಡದಿಂದ ಎರಡು ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣದ ದೂರುಗಳು ಮತ್ತು ಜಯಂತ್ ಎಂಬವರಿಂದ ಒಂದು ದೂರರ್ಜಿಯು ಧರ್ಮಸ್ಥಳ ಪೊಲೀಸ್ ಠಾಣೆಗೆ ವರದಿಯಾಗಿರುತ್ತದೆ.
ಜುಲೈ 31 ರಂದು ಎಸ್.ಐ.ಟಿ ತಂಡ ಉತ್ಖನನ ಮಾಡುತ್ತಿದ್ದಾಗ ಒಂದು ಸ್ಥಳದಲ್ಲಿ ದೊರೆತ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ:35/2025 ಪ್ರಕರಣ ದಾಖಲಾಗಿದೆ. ಈಗಾಗಲೇ ಉತ್ಖನನಕ್ಕಾಗಿ ನಿಗದಿಪಡಿಸಲಾಗಿರುವ ಸ್ಥಳಗಳ ಹೊರತಾಗಿ ಆಗಸ್ಟ್ 4 ರಂದು ಬೇರೆ ಜಾಗದಲ್ಲಿ, ಮಣ್ಣಿನ ಮೇಲೆ ಕಂಡುಬಂದ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಆಗಸ್ಟ್ 5 ರಂದು ಯು.ಡಿ.ಆರ್ ಸಂಖ್ಯೆ 36/2025 ರಂತೆ ಪ್ರಕರಣ ದಾಖಲಾಗಿದೆ.
ಜಯಂತ್ ಎಂಬವರು ನೀಡಿದ ದೂರಿಗೆ ಸಂಬಂಧಿಸಿದಂತೆ ಆಗಸ್ಟ್ 4 ರಂದು ಧರ್ಮಸ್ಥಳ ಠಾಣೆಯಲ್ಲಿ 200/ಡಿಪಿಎಸ್/2025 ರಂತೆ ದಾಖಲಾಗಿರುವ ದೂರರ್ಜಿ ಇವುಗಳನ್ನು ಡಿಜಿ ಮತ್ತು ಐಜಿಪಿ ಅವರ ಅನುಮೋದನೆ ಪಡೆದು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
0 comments:
Post a Comment