ಮಂಗಳೂರು, ಆಗಸ್ಟ್ 16, 2025 (ಕರಾವಳಿ ಟೈಮ್ಸ್) : ಶ್ರೀಕೃಷ್ಣನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಸಹಕಾರದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣ ಜಯಂತಿಯು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಭಗವಾನ್ ಶ್ರೀ ಕೃಷ್ಣನ ಜೀವನ ಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು ಎಂದರು.
ಉಪನ್ಯಾಸಗೈದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ ಧನಂಜಯ್ ಕುಂಬ್ಳೆ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ತನ್ನ ಬದುಕಿನುದ್ದಕ್ಕೂ ದುಷ್ಟತನವನ್ನು ಅನ್ಯಾಯವನ್ನು ಸಹಿಸಿದವನಲ್ಲ. ಅಧರ್ಮ ಹೆಚ್ಚಿದಾಗ ಧರ್ಮದ ಸ್ಥಾಪನೆಗೆ ಶ್ರೀಕೃಷ್ಣ ಜನ್ಮ ತಾಳಿರುತ್ತಾನೆ. ಸ್ತ್ರೀಯರನ್ನು ದುಷ್ಟರ ಬಲೆಯಿಂದ ವಿಮುಕ್ತಿಗೊಳಿಸುತ್ತಾನೆ. ಗೋವಿನ ಮೇಲೆ ವಿಶೇಷವಾದ ಪ್ರೀತಿಯನ್ನು ತನ್ನ ಬದುಕಿನುದ್ದಕ್ಕೂ ತೋರಿಸಿದ್ದಾನೆ. ಒಟ್ಟಾರೆ ಸ್ತ್ರೀ ವಿಮೋಚನೆ ಹಾಗೂ ಗೋಭಕ್ತಿಯನ್ನು ತೋರಿಸಿದ ಹೆಗ್ಗಳಿಕೆ ಕೃಷ್ಣನದು. ಶ್ರೀಕೃಷ್ಣ ಜಯಂತಿ ಆಚರಣೆಯ ಜೊತೆಗೆ ಆತನ ಜೀವನ ಚರಿತ್ರೆ ಸಂದೇಶಗಳನ್ನು ಸ್ಮರಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಅಡಿಶನಲ್ ಎಸ್ಪಿ ಅನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ ಆರ್ ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ ಕೆ ಮಣಿಯಾಣಿ ಬೆಳ್ಳಾರೆ ಮೊದಲಾದವರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.















0 comments:
Post a Comment