ಶಾಂತಿಯುತ ಸಮಾಜದ ನಿರ್ಮಾಣ ನಮ್ಮೆಲ್ಲರ ಹೊಣೆ : ಸರಕಾರದ ಸುತ್ತೋಲೆ, ಕಾನೂನಿಗೆ ಬದ್ದವಾಗಿ ಕಾರ್ಯಕ್ರಮ ನಡೆಯಲಿದೆ
ಬಂಟ್ವಾಳ, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ಎಲ್ಲ ಸಮಾಜ ಬಾಂಧವರು ಭಾಗವಹಿಸುವ ರೀತಿಯಲ್ಲಿ ಜಕ್ರಿಬೆಟ್ಟು ಗಣೇಶೋತ್ಸವ ಆಚರಿಸಿಕೊಂಡು ಬಂದಿರುವುದು ನಮಗೆ ಅತ್ಯಂತ ಹೆಮ್ಮೆ ತಂದಿದೆ. ಕಾರ್ಯಕ್ರಮ ಆಯೋಜಕರ ನಡವಳಿಕೆಯಿಂದಲೇ ಬಂಟ್ವಾಳ ಗಣೇಶೋತ್ಸವಕ್ಕೆ ಎಲ್ಲ ವರ್ಗದ ಜನರನ್ನು ಕೈ ಬೀಸಿ ಕರೆಯುವಂತಾಗಿದೆ ಎಂದು ಮಾಜಿ ಸಚಿವ, ಜಕ್ರಿಬೆಟ್ಟು ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಸೋಮವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಆಗಸ್ಟ್ 27 ರಿಂದ 31ರವರೆಗೆ ಬಂಟ್ವಾಳ-ಬೈಪಾಸ್ ಜಕ್ರಿಟ್ಟುವಿನಲ್ಲಿ ನಡೆಯುವ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು,
ಯಾವುದೇ ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗಿರದೆ ಎಲ್ಲರೂ ಒಂದಾಗಿ ಬೆಸೆಯುವ, ಬೆರೆಯುವ ಸೌಹಾರ್ದತೆಯ ಸಮ್ಮೇಳನವಾಗಿ ರೂಪುಗೊಂಡು “ಬಂಟ್ವಾಳದ ಹಬ್ಬ” ವಾಗಿ ಆಚರಿಸಲ್ಪಡುವ ಜಕ್ರಿಬೆಟ್ಟು ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಎಲ್ಲರನ್ನೂ ವೈಯುಕ್ತಿಕವಾಗಿ ಕಂಡು ಆಹ್ವಾನ ಕೊಡಲು ಸಾಧ್ಯವಾಗದಿದ್ದರೂ ನಮ್ಮ ಕಾರ್ಯಕ್ರಮದ ರೀತಿಯನ್ನು ಕಂಡು ಎಲ್ಲ ಸಮಾಜ ಬಾಂಧವರು ಭಾಗವಹಿಸಿ ಸಹಕರಿಸಿದ್ದಾರೆ ಎಂಬುದೇ ಸಂತೋಷದ ಸಂಗತಿಯಾಗಿದೆ ಎಂದರು.
ಭಾವೈಕ್ಯತೆಗೆ ಪೂರಕವಾದ ಆಚರಣೆ ವಿನಾಯಕ ಆಚರಣೆ ನಡೆಸಲಾಗುತ್ತಿದೆ. ಐದು ದಿನಗಳ ಕಾಲ ನಡೆಯುವ ಇಲ್ಲಿನ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎಲ್ಲ ದಿನಗಳಲ್ಲೂ ಅನ್ನದಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ. ಕಳೆದ 21 ವರ್ಷಗಳಿಂದಲೂ ಇಲ್ಲಿನ ಗಣೇಶೋತ್ಸವ ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರಲು ವಿನಾಯಕ ಅನುಗ್ರಹಿಸಿದ್ದಾನೆ. ವಿಘ್ನ ವಿನಾಶಕ ಎಲ್ಲ ವಿಘ್ನಗಳನ್ನು ನಿವಾರಿಸಿದ್ದಾನೆ. ಈ ಬಾರಿಯೂ ಎಲ್ಲರ ಸಹಕಾರ ಬೇಕಾಗಿದೆ ಹಾಗೂ 22ನೇ ವರ್ಷದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ರಮಾನಾಥ ರೈ ಮನವಿ ಮಾಡಿದರು.
ಶಾಂತಿಯುತ ಸಮಾಜ ನೆಲೆ ನಿಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರಕಾರದ ನಿಯಮಗಳಿಗೆ, ಕಾನೂನಿಗೆ ಬದ್ದವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಮುಗಿಸಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಮಾಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಪೂಜೆ ಮುಗಿಸಿ ನಂತರದ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಮಾಡಲಾಗುವುದು. ಪೆÇಲೀಸ್ ಇಲಾಖೆಯ ಸುತ್ತೋಲೆ ಪಾಲನೆ ಮಾಡಲಾಗುವುದು ಎಂದು ಇದೇ ವೇಳೆ ರಮಾನಾಥ ರೈ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಲ್ಲೋಡಿಗುತ್ತು ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಮೋಹನ್ ಚೆಂಡ್ತಿಮಾರ್, ಪ್ರವೀಣ್ ಕಿಣಿ ಬಂಟ್ವಾಳ, ಸುದೀಪ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಜಯಂತಿ ವಿ ಪೂಜಾರಿ, ರಾಜೀವ ಶೆಟ್ಟಿ ಎಡ್ತೂರು, ವೆಂಕಪ್ಪ ಪೂಜಾರಿ, ಅಶೋಕ್ ಭಂಡಾರಿಬೆಟ್ಟು, ದೇವಪ್ಪ ಕುಲಾಲ್, ಮಹಾಬಲ ಬಂಗೇರ ಮೊದಲಾದವರು ಜೊತೆಗಿದ್ದರು.
















0 comments:
Post a Comment