ಉಪ್ಪಿನಂಗಡಿ, ನವೆಂಬರ್ 06, 2025 (ಕರಾವಳಿ ಟೈಮ್ಸ್) : ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಸಹಪಾಠಿಯ ಆರೋಗ್ಯ ವಿಚಾರಿಸಲು ಜೊತೆಯಾಗಿ ತೆರಳುತ್ತಿದ್ದ ಪದವಿ ವಿದ್ಯಾರ್ಥಿಗಳನ್ನು ದಾರಿಯಲ್ಲಿ ತಡೆದು ಕೋಮು ಆಧಾರಿತವಾಗಿ ಪ್ರಶ್ನಿಸಿದ್ದಲ್ಲದೆ ಓರ್ವ ವಿದ್ಯಾರ್ಥಿಗೆ ಹಲ್ಲೆ ನಡೆಸಿ ಮತ್ತೆ ಜಿಲ್ಲೆಯಲ್ಲಿ ಗೂಂಡಾಗಿರಿ ಮೆರೆಯಲು ಯತ್ನಿಸಿದ ಘಟನೆ ಪೆರಿಯಡ್ಕ ಎಂಬಲ್ಲಿ ನ 6 ರಂದು ಗುರುವಾರ ನಡೆದಿದ್ದು, ಇಬ್ಬರು ದುಷ್ಕಿರ್ಮಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮುಸ್ತಫಾ ಹಾಗೂ ಮುಸ್ತಫಾ ಪೆರಿಯಡ್ಕ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಪದವಿ ವಿದ್ಯಾರ್ಥಿಯೋರ್ವ ಪೊಲೀಸರಿಗೆ ದೂರು ನೀಡಿದ್ದು, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹಪಾಠಿ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದು, ಆತನ ಆರೋಗ್ಯ ವಿಚಾರಿಸುವ ಸಲುವಾಗಿ, 10 ಮಂದಿ ಸಹಪಾಠಿ ವಿಧ್ಯಾರ್ಥಿ-ವಿಧ್ಯಾರ್ಥಿನಿಯರ ಜೊತೆ ತೆರಳಿದ್ದು, ನವೆಂಬರ್ 6 ರಂದು ಬೆಳಗ್ಗೆ ಕಾಲೇಜಿನಿಂದ ಹೊರಟು ಪೆರಿಯಡ್ಕ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಆರೋಪಿಗಳು ವಿಧ್ಯಾರ್ಥಿ-ವಿಧ್ಯಾರ್ಥಿನಿಯರನ್ನು ತಡೆದು ನಿಲ್ಲಿಸಿದ್ದಾರೆ. ವಿಧ್ಯಾರ್ಥಿಗಳ ಹೆಸರು, ಕಾಲೇಜ್ ಹಾಗೂ ಊರಿನ ಬಗ್ಗೆ ವಿಚಾರಿಸಿ, ವಿಭಿನ್ನ ಕೋಮುಗಳ ವಿಧ್ಯಾರ್ಥಿ-ವಿಧ್ಯಾರ್ಥಿನಿಯರು ಜೊತೆಗೆ ತೆರಳುತ್ತಿರುವ ಬಗ್ಗೆ ತಕರಾರು ತೆಗೆದು, ಕೋಮು ದ್ವೇಷದಿಂದ ಅವಾಚ್ಯವಾಗಿ ಬೈದು, ಓರ್ವ ವಿಧ್ಯಾರ್ಥಿಗೆ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2025, ಕಲಂ 126(2), 352, 351(2), 115(2), 353(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.















0 comments:
Post a Comment