ಬಂಟ್ವಾಳ, ನವೆಂಬರ್ 10, 2025 (ಕರಾವಳಿ ಟೈಮ್ಸ್) : ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯೋರ್ವನನ್ನು ಸೆರೆ ಹಿಡಿದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದಲ್ಲಿ ನ 9 ರಂದು ನಡೆದಿದೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ತಲಪಾಡಿ ನಿವಾಸಿ ಕಿರಣ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್ ಶೆಟ್ಟಿ (53) ಎಂಬವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆ ಸಮೀಪ ಶ್ರೀಮತಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಸದ್ರಿ ಪ್ರೇಮಾ ಶೆಟ್ಟಿ ಅವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿಸಿ ಟಿವಿ ಅಳವಡಿಸಿರುತ್ತಾರೆ. ನವೆಂಬರ್ 9 ರಂದು ಬೆಳಿಗ್ಗೆ, ಪ್ರೇಮಾ ಅವರ ಮಗಳು ಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ ವ್ಯಕ್ತಿ ಕಳ್ಳತನಕ್ಕೆ ಬಂದಿರುವಂತೆ ಸಿಸಿ ಟಿವಿಯಲ್ಲಿ ಕಾಣುತ್ತಿರುವುದಾಗಿ ತಿಳಿಸಿದ್ದಾರೆ.
ತಕ್ಷಣ ಪ್ರಕಾಶ್ ಶೆಟ್ಟಿ ಅವರು ಪ್ರೇಮ ಅವರ ಮನೆಯ ಬಳಿ ತೆರಳಿ ನೋಡಿದಾಗ, ಪ್ರೇಮಾ ಅವರ ಮನೆಯ ಮೇಲ್ಚಾವಣಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತುಕೊಂಡಿದ್ದು, ಪ್ರಕಾಶ್ ಶೆಟ್ಟಿ ಅವರನ್ನು ನೋಡಿ ಕೆಳಗೆ ಹಾರಿ ಓಡಿ ತಪ್ಪಿಸಲು ಪ್ರಯತ್ನಿಸಿರುತ್ತಾನೆ. ಈ ವೇಳೆ ಪ್ರಕಾಶ್ ಶೆಟ್ಟಿ ಅವರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಸದ್ರಿ ಅಪರಿಚಿತ ವ್ಯಕ್ತಿಯು ಆತನ ಕೈಯಲ್ಲಿದ್ದ ರಾಡಿನಿಂದ ಹಲ್ಲೆ ನಡೆಸಿರುತ್ತಾನೆ. ಬಳಿಕ ಸ್ಥಳೀಯ ನಿವಾಸಿಗಳ ಸಹಾಯದಿಂದ ಅಪರಿಚಿತ ವ್ಯಕ್ತಿಯನ್ನು ಹಿಡಿಯಲಾಗಿದೆ. ಆತನ ಬಗ್ಗೆ ವಿಚಾರಿಸಲಾಗಿ ಆತ ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಎಂದು ತಿಳಿದು ಬಂದಿದೆ. ಬಳಿಕ ಆತನನ್ನು ಪೂಂಜಾಲಕಟ್ಟೆ ಪೆÇಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿತನ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ವ್ಯಾಪ್ತಿಯಲ್ಲಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ, ಒಟ್ಟು 13 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.















0 comments:
Post a Comment