ಬಂಟ್ವಾಳ, ಡಿಸೆಂಬರ್ 09, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಬಾ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸಲಾಗುತ್ತಿರುವ ನೇತ್ರಾವತಿ ಹಳೆ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ ಎನ್ನುವ ಕಾರಣಕ್ಕೆ ಇಲ್ಲಿನ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಘನ ವಾಹನ ಸಂಚಾರ ನಿರ್ಬಂಧಕ್ಕಾಗಿ ಸೇತುವೆ ಎರಡೂ ಬದಿಗಳಲ್ಲಿ ಕಬ್ಬಿನ ಕಮಾನು ಅಳವಡಿಸಲಾಗಿದೆ. ಆದರೆ ಇಲ್ಲಿ ತಡೆಬೇಲಿ ಅಳವಡಿಸಿರುವ ಬಗ್ಗೆ ವಾಹನ ಸವಾರರಿಗೆ ಮುನ್ಸೂಚನೆ ನೀಡುವ ಯಾವುದೇ ಕ್ರಮವನ್ನು ತಾಲೂಕಾಡಳಿತವಾಗಲೀ, ಪುರಸಭಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಕೈಗೊಂಡಿಲ್ಲ. ಇದರಿಂದಾಗಿ ಇಲ್ಲಿ ಸೇತುವೆಗೆ ತಡೆ ಬೇಲಿ ಅಳವಡಿಸಲಾಗಿರುವ ಬಗ್ಗೆ ವಾಹನ ಸವಾರರಿಗೆ ಗೊತ್ತೇ ಆಗದ ಪರಿಣಾಮ ಹಲವು ಬಾರಿ ಘನ ವಾಹನಗಳು ನೇರವಾಗಿ ಬಂದು ಕಬ್ಬಿಣದ ಕಮಾನಿಗೆ ಸಿಲುಕಿಕೊಂಡ ಘಟನೆಗಳು ನಡೆದಿದೆ. ನಿರಂತರವಾಗಿ ನಡೆಯುತ್ತಲೇ ಇದೆ.
ಅಲ್ಲದೆ ಇಲ್ಲಿನ ತಡೆಬೇಲಿ ಬಗ್ಗೆ ಎಚ್ಚರಿಸಲು ವಾಹನಗಳ ವೇಗ ನಿಯಂತ್ರಿಸುವ ಉದ್ದೇಶದಿಂದ ಸೇತುವೆಯ ಎರಡೂ ಬದಿಗಳಲ್ಲಿ ರಸ್ತೆ ಉಬ್ಬುಗಳನ್ನು ಅಳವಡಿಸಲಾಗಿದ್ದು ಇದೂ ಕೂಡಾ ವಾಹನ ಸವಾರರ ಗಮನಕ್ಕೆ ಬರದೆ ಇಲ್ಲೂ ಕೂಡಾ ಅನಾಹುತಗಳೇ ನಡೆಯುತ್ತಿರುವುದು ನಿತ್ಯವೂ ಕಂಡು ಬರುತ್ತಿದೆ. ರಸ್ತೆ ಹಂಪ್ಸ್ ಅಳವಡಿಸಿರುವ ಬಗ್ಗೆ ಯಾವುದೆ ಮುನ್ಸೂಚನೆಯಾಗಲೀ, ಅಥವಾ ರಸ್ತೆ ಉಬ್ಬುಗೆ ಬಣ್ಣ ಹಚ್ಚುವುದಾಗಲೀ ಕೈಗೊಳ್ಳದೆ ಇರುವ ಪರಿಣಾಮ ಇಲ್ಲಿನ ರಸ್ತೆ ಉಬ್ಬು ಅರಿವಿಗೆ ಬಾರದೆ ವಾಹನ ಸವಾರರು ಗಲಿಬಿಲಿಗೊಳ್ಳುತ್ತಿದ್ದಾರೆ. ಹಲವು ಬಾರಿ ಅಪಘಾತಗಳು ಸಂಭವಿಸಿ ವಾಹನ ಸವಾರರು ಅಪಾಯಗಳನ್ನು ಎದುರಿಸಿದ್ದಾರೆ.
ಇನ್ನಾದರೂ ಗಂಭೀರ ಅಪಘಾತಗಳು, ಸಾವು-ನೋವುಗಳು ಸಂಭವಿಸುವ ಮುನ್ನ ಸಂಬಂಧಪಟ್ಟವರು ಸಕಾಲದಲ್ಲಿ ಎಚ್ಚೆತ್ತುಕೊಂಡು ಇಲ್ಲಿನ ಸೇತುವೆ ಕಮಾನು ಹಾಗೂ ರಸ್ತೆ ಹಂಪ್ಸ್ ಬಗ್ಗೆ ವಾಹನ ಸವಾರರ ಗಮನಕ್ಕೆ ಬರುವಂತೆ ಸೂಕ್ತ ರೀತಿಯಲ್ಲಿ ಎಚ್ಚರಿಕಾ ಫಲಕ ಸಹಿತ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.















0 comments:
Post a Comment