ಮಂಗಳೂರು, ಡಿಸೆಂಬರ್ 05, 2025 (ಕರಾವಳಿ ಟೈಮ್ಸ್) : ಕುಖ್ಯಾತ ಅಂತರ್ ರಾಜ್ಯ ವಾಹನ ಚೋರ ಹಾಗೂ ಸರಗಳ್ಳತನ ಪ್ರಕರಣಗಳ ಆರೋಪಿಯೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ವಲಿಯರ್ತಲ, ವೆಲ್ಲಟ್ಟಿ ವೀಡು ನಿವಾಸಿ ಗೋಪಾನ್ ನಾಯರ್ ಎಂಬವರ ಪುತ್ರ ಆದಿತ್ ಗೋಪಾನ್ ಅಲಿಯಾಸ್ ಮುತ್ತು ಕೃಷ್ಣ (32) ಎಂದು ಹೆಸರಿಸಲಾಗಿದೆ. ನವೆಂಬರ್ 21 ರಂದು ಸಂಜೆ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ದ ಮಹಿಳೆಯು ತನ್ನ ಮನೆಯ ಬಳಿ ಓಣಿಯಲ್ಲಿದ್ದಾಗ ಅಪರಿತ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರವನ್ನು ಕಸಿದುಕೊಂಡು ಹೋದ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಪತ್ತೆ ಬಗ್ಗೆ ಪೊಲೀಸರು ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಡಿಸೆಂಬರ್ 4 ರಂದು ಆರೋಪಿಯ ಬಗ್ಗೆ ವಿಶೇಷ ತಂಡಕ್ಕೆ ದೊರೆತ ಮಾಹಿತಿಯಂತೆ ಕದ್ರಿ ಜೋಗಿ ಮಠದ ಬಳಿ ವಾಹನ ತಪಸಾಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದವಾಗಿ ದ್ವಿಚಕ್ರ ವಾಹನ ಸಂಖ್ಯೆ ಕೆಎ19 ಎಚ್ ಸಿ6946 ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಈ ವಾಹನವು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ವಾಹನವಾಗಿದ್ದು, ವಿಚಾರಿಸಿದಾಗ ಆರೋಪಿಯು ಕಳ್ಳತನ ಮಾಡಿದ ದ್ವಿ ಚಕ್ರ ವಾಹನವನ್ನು ಬಳಸಿಕೊಂಡು ವಯೋವೃದ್ದರು, ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಡಿ 5 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಆರೋಪಿಯನ್ನು 3 ದಿನಗಳ ಕಾಲ ಪೆÇಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯ ವಿಚಾರಣೆ ವೇಳೆ ನ 21 ರಂದು ಕದ್ರಿ ಬಟ್ಟಗುಡ್ಡೆ ಬಳಿ ವಯೋವೃದ್ದ ಮಹಿಳೆಯ 1.5 ಪವನ್ ಸರವನ್ನು ಸುಲಿಗೆ ಮಾಡಿದ ಪ್ರಕರಣ, ಸೆ 27 ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಕೋಟೆಕೇರಿ ಬಳಿ ಒಂಟಿ ಮಹಿಳೆಗೆ ಚೂರಿ ತೋರಿಸಿ ಬೆದರಿಸಿ 2 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣ, ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ ಪ್ರಕರಣ, ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ ಪ್ರಕರಣ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ನಡೆಸಿದ ದ್ವಿಚಕ್ರ ವಾಹನ ಕಳವು ಪ್ರಕರಣ, ಸುರತ್ಕಲ್ ಠಾಣಾ ವ್ಯಾಪ್ತಿಯ ಅಗರಮೇಲು ಬಳಿ ನಡೆಸಿದ ದ್ವಿಚಕ್ರ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮೇಲಿನ ಎಲ್ಲಾ ಪ್ರಕರಣಗಳು ಒಟ್ಟು ಸೇರಿ ಆರೋಪಿಯಿಂದ 4 ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ಸಮೇತ ಒಟ್ಟು 5 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯ ವಿರುದ್ದ ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ಮನೆಗಳಿಗೆ ಹೊಂಚು ಹಾಕಿ 4 ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸವನ್ನು ಅನುಭವಿಸಿ ಬಿಡುಗಡೆಗೊಂಡಿರುತ್ತಾನೆ. ಈತ ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ರೈಲಿನಲ್ಲಿ ಭಾರತ ದೇಶದ ಎಲ್ಲಾ ಕಡೆ ಸುತ್ತಾಡಿಕೊಂಡು ರೈಲ್ವೇ ನಿಲ್ದಾಣದ ಬಳಿ ಆಸುಪಾಸಿನಲ್ಲಿ ಇರುವ ದ್ವಿಚಕ್ರ ವಾಹನ ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದನು. ನಂತರ ರೈಲಿನಲ್ಲಿ ವಿವಿಧ ಕಡೆ ಪ್ರಯಾಣ ಮಾಡಿ ತಲೆಮರೆಸಿಕೊಳ್ಳುತ್ತಿದ್ದನು. ಈತನ ಪತ್ತೆಗೆ ಪೆÇಲೀಸರ ವಿಶೇಷ ಪ್ರಯತ್ನದಿಂದ ಪ್ರಕರಣವು ಅತೀ ಶೀಘ್ರದಲ್ಲಿ ಪತ್ತೆಯಾಗಿದೆ.
ಪ್ರಕರಣವನ್ನು ಮಂಗಳೂರು ಪೂರ್ವ ಪೆÇಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮಾನಾಭ ಮತ್ತು ಕದ್ರಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.
ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಠಾಣೆಗಳಲ್ಲಿ 2025ನೇ ಸಾಲಿನಲ್ಲಿ ಈವರೆಗೆ 72 ದ್ವಿಚಕ್ರ ವಾಹನಗಳು ಕಳವಾಗಿದ್ದು, ಇದರ ಪೈಕಿ ಕಳವಾದ 57 ದ್ವಿಚಕ್ರ ವಾಹನಗಳು ಪತ್ತೆ ಮಾಡಲಾಗಿದ್ದು, 15 ದ್ವಿಚಕ್ರ ವಾಹನಗಳು ಮಾತ್ರ ಪತ್ತೆಗೆ ಬಾಕಿ ಇದೆ. ನಗರದಲ್ಲಿ ಒಟ್ಟು ಶೇಕಾಡ 79% ಕಳವಾದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.














0 comments:
Post a Comment