ಬಂಟ್ವಾಳ, ಫೆಬ್ರವರಿ 09, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಪರಿಣಾಮ ಬೈಕಿನಲ್ಲಿದ್ದ ದಂಪತಿ ಹಾಗೂ ಮಗು ಗಾಯಗೊಂಡ ಘಟನೆ ಬಿ ಕಸಬಾ ಗ್ರಾಮದ ಚೆಂಡ್ತಿಮಾರು ಎಂಬಲ್ಲಿ ಫೆಬ್ರವರಿ 7 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಮಂಚಿ ಸೈಟ್ ನಿವಾಸಿ ಉಬೈದ್ (28), ಅವರ ಪತ್ನಿ ರಮ್ಲತ್ (23) ಹಾಗೂ ಒಂದು ವರ್ಷ ಪ್ರಾಯದ ಮಗು ರಿಜಾನ್ ಎಂದು ಹೆಸರಿಸಲಾಗಿದೆ. ಉಬೈದ್ ಅವರು ಫೆ 7 ರಂದು ಬೈಕಿನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಗ್ಗ ಕಡೆಯಿಂದ ತನ್ನ ಮನೆಯಾದ ಮಂಚಿ ಕಡೆಗೆ ಕಡೂರ್-ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಸಂಜೆ ಸುಮಾರು 5.30 ಗಂಟೆಗೆ ಬಿ ಕಸಬಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಅಂದರೆ ಬಿ ಸಿ ರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಮೊಹಮ್ಮದ್ ಅಸ್ಲಾಂ ಎಂಬಾತ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ದಂಪತಿ ಹಾಗೂ ಮಗು ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಮೂವರಿಗೂ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಇವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಡೀಲ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment