ಮಂಗಳೂರು, ಫೆಬ್ರವರಿ 11, 2026 (ಕರಾವಳಿ ಟೈಮ್ಸ್) : ಮಂಗಳೂರು ತಾಲೂಕಿನ ಬಜಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಪ್ರಸ್ತುತ ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ ಹಾಗೂ ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ವಾಹನಗಳ ಓಡಾಟಕ್ಕೆ ಇದ್ದ ಹಳೆ ರಸ್ತೆಯು ಘನ ವಾಹನಗಳ ಓಡಾಟದಿಂದ ಬಿರುಕು ಬಿಟ್ಟು ಅಲ್ಲಲ್ಲಿ ಕುಸಿಯಲು ಪ್ರಾರಂಭಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫೆಬ್ರವರಿ 12 ರಿಂದ ಮಾರ್ಚ್ 13ರವರೆಗೆ 30 ದಿನಗಳ ಕಾಲ ರಸ್ತೆ ದುರಸ್ತಿ ಕಾಮಗಾರಿ ನಡೆಸಲಿದೆ.
ಸದ್ರಿ ರಸ್ತೆ ದುರಸ್ತಿ ಕಾಮಗಾರಿ ನಡೆಯುವ ಸಮಯ ಸಾರ್ವಜನಿಕ ಹಿತದೃಷ್ಠಿಯಿಂದ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಮತ್ತು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ತಾತ್ಕಾಲಿಕವಾಗಿ ಈ ಕೆಳಗಿನ ಬದಲಿ ರಸ್ತೆಗಳನ್ನು ಉಪಯೋಗಿಸಬಹುದಾಗಿದೆ.
ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಲಾರಿಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್ ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಪಕ್ಷಿಕೆರೆ ಕ್ರಾಸ್ ನಲ್ಲಿ ಬಲಕ್ಕೆ ತಿರುಗಿ ಮುಲ್ಕಿ ಜಂಕ್ಷನ್-ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು ಹಾಗೂ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುವುದು.
ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಇತರ ಎಲ್ಲಾ ಲಘು ವಾಹನಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್ ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಮೂರುಕಾವೇರಿ-ಕಟೀಲು-ಪೆರ್ಮುದೆ-ಬಜಪೆ- ಮೂಲಕ ಅಥವಾ ಪಕ್ಷಿಕೆರೆ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ಹಳೆಯಂಗಡಿ-ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು ಹಾಗೂ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಇತರ ಎಲ್ಲಾ ಲಘು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವುದು.
ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ದಡ್ಡಿ ಕ್ರಾಸ್ ಬಳಿ ಬಲಕ್ಕೆ ತಿರುಗಿ ಪುಮಾರ್ ಪದವು ಕ್ರಾಸ್-ಮಂಜನ ಕಟ್ಟೆ ಕ್ರಾಸ್- ಅರ್ಜುನಕೋಡಿ-ಈಶ್ವರಕಟ್ಟೆ ಕ್ರಾಸ್-ಮುಚ್ಚೂರು ಕ್ರಾಸ್ ಬಳಿ ಬಲಕ್ಕೆ ತಿರುಗಿ ಕೈಕಂಬ ಗುರುಪುರ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು.
ಮಂಗಳೂರು ಕಡೆಯಿಂದ ಗುರುಪುರ-ಕೈಕಂಬ ಮೂಲಕ ಮೂಡಬಿದ್ರೆ ಕಡೆಗೆ ಹೋಗುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ಗಂಜಿಮಠದಿಂದ ಮುಂದೆ ಮುಚ್ಚೂರು ಕ್ರಾಸ್ ಬಳಿ ಎಡಕ್ಕೆ ತಿರುಗಿ ಈಶ್ವರಕಟ್ಟೆ ಕ್ರಾಸ್-ಅರ್ಜುನಕೋಡಿ-ಮಂಜನ ಕಟ್ಟೆ ಕ್ರಾಸ್-ಪುಮಾರ್ ಪದವು ಕ್ರಾಸ್-ದಡ್ಡಿ ಕ್ರಾಸ್ ಬಳಿ ಎಡಕ್ಕೆ ಸಂಚರಿಸಿ ಮೂಡಬಿದ್ರೆ ಕಡೆಗೆ ಸಂಚರಿಸುವುದು.
ಮಂಗಳೂರು ಕಡೆಯಿಂದ ಮೂಡಬಿದ್ರೆ ಮೂಲಕ ಕಾರ್ಕಳ ಕಡೆಗೆ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್-ಮುಲ್ಕಿ-ಪಡುಬಿದ್ರೆಯಿಂದಾಗಿ ಕಾರ್ಕಳ ಕಡೆಗೆ ಸಂಚರಿಸುವುದು.
ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನ್ ಸುಧೀರ್ ರೆಡ್ಡಿ ಕೋರಿದ್ದಾರೆ.













0 comments:
Post a Comment