ಉಳ್ಳಾಲ, ಮಾರ್ಚ್ 28, ಮಾರ್ಚ್, 2026 (ಕರಾವಳಿ ಟೈಮ್ಸ್) : ಉಳ್ಳಾಲ ಸಮೀಪದ ತೊಕ್ಕೊಟ್ಟು ಫ್ಲೈ ಓವರ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಕಾರು ಡಿಕ್ಕಿ ಹೊಡೆದು ಬೈಕಿನಲ್ಲಿ ತೆರಳುತ್ತಿದ್ದ ಕೆ ಸಿ ರೋಡು, ಅಜ್ಜಿನಡ್ಕ ಮುಳ್ಳುಗುಡ್ಡೆ ನಿವಾಸಿ ಆರಿಫ್ ಹುಸೈನ್ (47) ಎಂಬವರನ್ನು ಕೊಚ್ಚಿ ಕೊಲೆ ಮಾಡಿದ ಘಟನೆಯ ಬಗ್ಗೆ ಮೊಹಮ್ಮದ್ ರಿಫಾತ್ ಅಲಿ ಮತ್ತು ಆತನ ಸಹಚರರ ಮೇಲೆ ಅನುಮಾನವಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ಪುತ್ರ ಅಬ್ದುಲ್ ಖಾದರ್ ಅದೀಫ್ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ 27 ರಂದು ಬೆಳಿಗ್ಗೆ ಸಮಯ ಸುಮಾರು 3.30 ರ ವೇಳೆಗೆ ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಫ್ಲೈ ಓವರ್ ರಸ್ತೆಯಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕೆಎ19 ಎಚ್ ಎಸ್ 2000 ನೋಂದಣಿ ಸಂಖ್ಯೆಯ ಬುಲೆಟ್ ಬೈಕಿನಲ್ಲಿ ಹೋಗುತ್ತಿದ್ದ ಆರಿಫ್ ಹುಸೈನ್ ಅವರನ್ನು ತಾವುಗಳು ಬಂದ ಕಾರಿನಿಂದ ಗುದ್ದಿ, ರಸ್ತೆಗೆ ಬೀಳಿಸಿ ಮಾರಕಾಯುಧಗಳಿಂದ ತಲೆಗೆ, ಮುಖಕ್ಕೆ, ಕೊಚ್ಚಿ ಕಡಿದು ಕೊಲೆ ಮಾಡಿದ್ದಾರೆ. ಸದ್ರಿ ಕೃತ್ಯದ ಬಗ್ಗೆ ಮೊಹಮ್ಮದ್ ರಿಫಾತ್ ಅಲಿ ಮತ್ತು ಆತನ ಸಹಚರರ ಮೇಲೆ ಅನುಮಾನವಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯಕ್ಕೆ ಬಳಸಿದ್ದೆನ್ನಲಾದ ಇನ್ನೋವಾ ಕಾರನ್ನು ಪೊಲೀಸರು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬುಡೋಳಿ ಎಂಬಲ್ಲಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಪತ್ತೆ ಹಿನ್ನಲೆಯಲ್ಲಿ ತೀವ್ರ ಕಾರ್ಯಾಚರಣೇ ಕೈಗೊಂಡಿದ್ದಾರೆ. ಆರೋಪಿಗಳ ಬಂಧನದ ಬಳಿಕ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬರಲಿದೆ.











0 comments:
Post a Comment