ಬಂಟ್ವಾಳ, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಫರಂಗಿಪೇಟೆ ಸಮೀಪದ ಹತ್ತನೇ ಮೈಲುಕಲ್ಲು ಬಳಿ ನೇತ್ರಾವತಿ ನದಿ ತೀರದಲ್ಲಿ ಪುದು ಗ್ರಾಮದ ನಿವಾಸಿಗಳ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಗಳ ರಾಶಿ ಪತ್ತೆಯಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮಂಗಳವಾರ ಸಂಜೆ ಸ್ಥಳೀಯರು ನದಿಯಲ್ಲಿ ತೇಲಿ ಬರುತ್ತಿದ್ದ ಆಧಾರ್ ಕಾರ್ಡ್ ಗಳನ್ನು ಗಮನಿಸಿದ್ದಾರೆ. ಬಳಿಕ ಹಲವು ಮಂದಿ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪುದು ಗ್ರಾಮದ ಅನೇಕ ಮನೆಗಳ ವಿಳಾಸ ಹೊಂದಿರುವ ಕಾರ್ಡ್ಗಳು ನದಿ ಬದಿಯಲ್ಲಿ ಚದುರಿಕೊಂಡಿರುವುದು ಕಂಡುಬಂದಿದೆ. ಇದರಿಂದ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಇಲ್ಲಿನ ಅಂಚೆ ಕಚೇರಿಗಳ ಬಗ್ಗೆ ಈಗಾಗಲೇ ಹಲವು ಬಾರಿ ಸಾರ್ವಜನಿಕರು ದೂರಿಕೊಂಡಿದ್ದರು. ತಮ್ಮ ಅಂಚೆ ಬಡವಾಟೆಯ ಪತ್ರಗಳು, ದಾಖಲೆಗಳು, ಕಡತಗಳು ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ ಎಂದು ಅಹವಾಲು ಸಲ್ಲಿಸಿದ್ದರು. ಇದೀಗ ಆಧಾರ್ ಕಾರ್ಡುಗಳ ರಾಶಿಯೇ ಪತ್ತೆಯಾಗಿರುವುದು ಗ್ರಾಮಸ್ಥರ ದೂರಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಂಚೆ ಕಚೇರಿ ನಿರ್ಲಕ್ಷ್ಯದಿಂದ ಆಧಾರ್ ಕಾರ್ಡ್ ಅಂಚೆ ಮೂಲಕ ಬಟವಾಡೆಯಾಗದೆ ಸಾರ್ವಜನಿಕರು ಸೈಬರ್ ಸೆಂಟರ್ ಗಳಲ್ಲಿ ಹಣ ವ್ಯಯಿಸಿ ಆಧಾರ್ ಕಾರ್ಡ್ ಪಡೆಯುವಂತಾಗಿದೆ. ನದಿ ಬದಿಯಲ್ಲಿ ಆಧಾರ್ ಕಾರ್ಡ್ ರಾಶಿ ಪತ್ತೆಯಾಗಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟವರಿಗೆ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಸ್ಥಳೀಯ ಶಾಸಕರಿಗೂ ಗ್ರಾಮ ಪಂಚಾಯತ್ ವತಿಯಿಂದ ದೂರು ಸಲ್ಲಿಸಲಾಗುವುದು ಎಂದವರು ತಿಳಿಸಿದ್ದಾರೆ.






















0 comments:
Post a Comment