ಮಂಗಳೂರು, ಎಪ್ರಿಲ್ 15, 2026 (ಕರಾವಳಿ ಟೈಮ್ಸ್) : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯು (ಜಿ.ಟಿ.ಟಿ.ಸಿ.) 1972ರಲ್ಲಿ ಕರ್ನಾಟಕ ಮತ್ತು ಡೆನ್ಮಾರ್ಕ್ ಸರ್ಕಾರದ ಕೈಗಾರಿಕಾ ಒಪ್ಪಂದದೊಂದಿಗೆ ಮೊದಲಿಗೆ ಬೆಂಗಳೂರಿನ ರಾಜಾಜಿ ನಗರ ಕೈಗಾರಿಕಾ ಪ್ರದೇಶದಲ್ಲಿ ಶುರುವಾಯಿತು. ಇದರ ಮುಖ್ಯ ಉದ್ದೇಶವು ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಿರುವ ಪರಿಣಿತ ತಂತ್ರಜ್ಞರ ಕೊರತೆಯನ್ನು ನೀಗಿಸುವುದಾಗಿರುತ್ತದೆ. ಹೀಗೆ ಒಂದು ಸಂಸ್ಥೆಯಿಂದ ಶುರುವಾಗಿ ಇಂದು ಕರ್ನಾಟಕಾದ್ಯಂತ ಸುಮಾರು 35 ಜಿ.ಟಿ.ಟಿ.ಸಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿ.ಟಿ.ಟಿ.ಸಿ. ಸಂಸ್ಥೆಯು ಮಂಗಳೂರಿನ ಬೈಕಂಪಾಡಿ ಪ್ರದೇಶದಲ್ಲಿ 1994 ರಿಂದ ಕಾರ್ಯನಿರ್ವಹಿಸುತ್ತಿದ್ದು ಇಂದು ಪ್ರಮುಖ ತಾಂತ್ರಿಕ ತರಬೇತಿ ಸಂಸ್ಥೆಯಾಗಿ ರೂಪುಗೊಂಡಿದೆ. ಪ್ರಸ್ತುತ ಮಂಗಳೂರಿನ ಜಿ.ಟಿ.ಟಿ.ಸಿ. ಕೇಂದ್ರದಲ್ಲಿ 3 ಡಿಪ್ಲೊಮಾ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಅವುಗಳೆಂದರೆ 1) ಡಿಪ್ಲೊಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್, 2) ಡಿಪ್ಲೊಮಾ ಇನ್ ಪ್ರಿಶಿಷನ್ ಮಾನ್ಯುಫ್ಯಾಕ್ಟರಿಂಗ್ ಹಾಗೂ 3) ಆರ್ಟಿಫಿಶಿಯಲ್ ಇಂಟಲಿಜನ್ಸ್ ಆಂಡ್ ಮೆಷಿನ್ ಲರ್ನಿಂಗ್. ಈ ಕೋರ್ಸುಗಳ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್ಸೆಸೆಲ್ಸಿ ಪಾಸಾಗಿರಬೇಕು ಮತ್ತು ದ್ವಿತಿಯ ಪಿಯುಸಿ (ಸೈನ್ಸ್) ಪಾಸ್ ಅಥವಾ ಐಟಿಐ ಪಾಸಾದ ವಿದ್ಯಾರ್ಥಿಗಳು ನೇರವಾಗಿ 2ನೆ ವರ್ಷಕ್ಕೆ ಪ್ರವೇಶಾತಿಯನ್ನು ಪಡೆಯಬಹುದು.
ಈ ಎಲ್ಲಾ ಕೋರ್ಸುಗಳ ಅವಧಿಯ 3+1 ವರ್ಷಗಳಾಗಿದ್ದು ಮೊದಲ 3 ವರ್ಷ ವಿದ್ಯಾರ್ಥಿಗಳು ಆಯಾ ಕೋರ್ಸುಗಳಿಗೆ ಸಂಬಂಧಿಸಿದಂತೆ ಥಿಯರಿ ಮತ್ತು ಪ್ರಾಕ್ಟಿಕಲ್ನಲ್ಲಿ ಸಂಸ್ಥೆಯಲ್ಲೇ ತರಬೇತಿಯನ್ನು ಪಡೆಯುತ್ತಾರೆ. 4ನೇ ವರ್ಷದಲ್ಲಿ ಕಡ್ಡಾಯ ಒಂದು ವರ್ಷದ ಇಂಟರ್ನ್ ಶಿಪ್ ತರಬೇತಿಗಾಗಿ ಬೆಂಗಳೂರು, ಮೈಸೂರು, ಮಂಗಳೂರು, ಗೋವಾ, ಮುಂಬೈ ಮತ್ತು ಪುನೆಗಳಲ್ಲಿ ನೆಲೆಗೊಂಡಿರುವ ಪ್ರತಿಷ್ಠಿತ ಕಂಪೆನಿಗಳಿಗೆ ಕಳಿಸಲಾಗುತ್ತದೆ.
ಈ ಇಂಟರ್ನ್ ಶಿಪ್ ಅವಧಿಯಲ್ಲಿ ವಿದ್ಯಾರ್ಥಿಯು ಕನಿಷ್ಠ 18 ರಿಂದ ಗರಿಷ್ಠ 20 ಸಾವಿರದವರೆಗೆ ಪ್ರತಿ ತಿಂಗಳು ಸ್ಟೈಫಂಡ್ ಪಡೆಯುತ್ತಾರೆ. ಮುಖ್ಯವಾಗಿ ಈ ಇಂಟರ್ನ್ ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ನೇರವಾಗಿ ಆಯಾ ಕೈಗಾರಿಕೆಗಳಲ್ಲಿ ಕೆಲಸ ಮಾಡುವುದರಿಂದ ಅವರ ತಾಂತ್ರಿಕ ಕೌಶಲ್ಯವು ಬಹಳಷ್ಟು ವೃದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿ ಅಂದರೆ ಕೋರ್ಸು ಮುಗಿದ ಮೇಲೆ ಈ ಕೈಗಾರಿಕಾ ಅನುಭವವು ನೇರವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ತುಂಬಾ ಸಹಕಾರಿಯಾಗುತ್ತದೆ. ಇಲ್ಲಿಯ ತನಕ ಮಂಗಳೂರು ಜಿ.ಟಿ.ಟಿ.ಸಿ. ಕೇಂದ್ರದಿಂದ 1,200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಡಿಪೆÇ್ಲೀಮಾ ಪಡೆದಿದ್ದು, ಅದರಲ್ಲಿ ಬಹಳಷ್ಟು ಮಂದಿ ಕರ್ನಾಟಕವೂ ಸೇರಿದಂತೆ ಭಾರತಾದ್ಯಂತ ಮತ್ತು ವಿದೇಶಗಳಲ್ಲಿನ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದು ಉನ್ನತ ಸ್ಥಾನಗಳನ್ನು ಸಹ ಪಡೆದಿರುತ್ತಾರೆ. ಇದರಿಂದಾಗಿ ಅವರು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ಪ್ರಗತಿಯನ್ನ ಸಾಧಿಸಿದ್ದಾರೆ. ಒಟ್ಟಿನಲ್ಲಿ ಜಿ.ಟಿ.ಟಿ.ಸಿ. ಕೇಂದ್ರಗಳು ಪ್ರಸ್ತುತ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ತಾಂತ್ರಿಕ ಕೌಶಲ್ಯವನ್ನು ಒದಗಿಸುದರ ಮೂಲಕ ಯುವ ಜನತೆಗೆ ಅನೇಕ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಮಹತ್ವದ ಕಾರ್ಯಗಳನ್ನ ನಿರ್ವಹಿಸುತ್ತಿದೆ.
ಶೀಘ್ರ ಉದ್ಯೋಗದ ಅವಶ್ಯಕತೆ ಇರುವ ಯುವಜನತೆ ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಕೋರ್ಸುಗಳಿಗೆ ಸೇರುವುದರ ಮೂಲಕ ಅನೇಕ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಜಿ.ಟಿ.ಸಿ.ಸಿ ಪ್ರಕಟಣೆ ತಿಳಿಸಿದೆ.











0 comments:
Post a Comment