ಮಂಗಳೂರು, ಮೇ 09, 2026 (ಕರಾವಳಿ ಟೈಮ್ಸ್) : ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಗೇರು ಬೆಳೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗೇರು ಮೇಳ ಮಹತ್ವದ ಕಾರ್ಯಕ್ರಮವಾಗಿದೆ ಎಂದು ವಿಧಾನಸಭಾ ಸ್ಪೀಕರ್ ಡಾ ಯು.ಟಿ. ಖಾದರ್ ಹೇಳಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೇ 17 ಹಾಗೂ 18 ರಂದು ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿರುವ ಗೇರು ಮೇಳದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗೇರು ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಗೇರು ಉದ್ಯಮ ಸಾಕಷ್ಟು ಕುಟುಂಬಗಳಿಗೆ ಆಧಾರವಾಗಿತ್ತು. ಬೆಳೆ ಕುಂಠಿತವಾದ ಕಾರಣ ದಕ್ಷಿಣ ಆಫ್ರಿಕಾದಿಂದ ಕಚ್ಚಾ ಗೇರು ಇಲ್ಲಿನ ಕಾರ್ಖಾನೆಗಳಿಗೆ ಆಮದಾಗುತ್ತಿದೆ ಮತ್ತು ಸಂಸ್ಕರಿತವಾದ ಗೇರು ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಇಳುವರಿ ನೀಡುವ ಗೇರು ತೋಟಗಳ ಕೃಷಿ ಮತ್ತು ಹೆಚ್ಚಿನ ಉತ್ಪಾದಕತೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭಕ್ಕಾಗಿ ಅದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮತ್ತು ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗೇರು ಮೇಳ ನಿಗಮದಿಂದ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ. ರಾಜ್ಯ ಮಟ್ಟದ ಗೇರು ಮೇಳ ಮತ್ತು ಕಾರ್ಯಾಗಾರ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೇ17 ಹಾಗೂ 18 ರಂದು ನಗರದ ಕದ್ರಿ ಪಾರ್ಕಿನಲ್ಲಿ ನಡೆಯಲಿದೆ. ಈ ಮೇಳದಲ್ಲಿ ಹೆಚ್ಚಿನ ಇಳುವರಿ ನೀಡುವ ಗೇರು ತೋಟಗಳ ಕೃಷಿ ಮತ್ತು ಹೆಚ್ಚಿನ ಉತ್ಪಾದಕತೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭಕ್ಕಾಗಿ ಅದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ರೈತರು ಮನೆಗೆ ಹೋಗುವಾಗ ಹೊಸ ಜ್ಞಾನ, ಸುಧಾರಿತ ತಳಿಯ ಸಸಿಗಳು ಮತ್ತು ಮಾರುಕಟ್ಟೆಯ ಭರವಸೆಯೊಂದಿಗೆ ಹೋಗುವಂತಿರಬೇಕು ಎಂಬ ಉದ್ದೇಶದೊಂದಿಗೆ ಈ ಮೇಳ ಉಚಿತ ಪ್ರವೇಶದೊಂದಿಗೆ ಜನರಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಗೇರು ಬೀಜ ಮತ್ತು ಹಣ್ಣಿನ ಉಪಯೋಗದ ಬಗ್ಗೆ ಮತ್ತು ಗೇರು ಬೆಳೆ ಮತ್ತು ಅದರ ಇಳುವರಿ ಪ್ರಾಮುಖ್ಯತೆ, ಗೇರು ಬೆಳೆಯ ಸಾಂಸ್ಕೃತಿಕ ಆಚರಣೆಗಳ ಪ್ಯಾಕೇಜ್ ವಿವಿಧ ಬಗೆಯ ಗೇರು ಗಿಡಗಳ ಪ್ರದರ್ಶನ, ಗೇರು ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಗೇರು ಉತ್ಪಾದನೆಯ ಪ್ರಸ್ತುತ ಸನ್ನಿವೇಶದ ಬಗ್ಗೆ ಕಾರ್ಯಾಗಾರ ಸಸಿ ವಿತರಣೆ, ಮೌಲ್ಯವರ್ಧನೆ ಕಾರ್ಯಾಗಾರ, ಗೇರು ಹಣ್ಣಿನಿಂದ ರಸ, ಜ್ಯಾಮ್ ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ, ಪ್ರಗತಿಪರ ರೈತರಿಗೆ ಸನ್ಮಾನ, ಖರೀದಿದಾರ-ಮಾರಾಟಗಾರರ ಸಮಾವೇಶ ನಡೆಯಲಿದೆ. ಗೇರು ಕೃಷಿಕರು ಹಾಗೂ ಸ್ವಸಹಾಯ ಗುಂಪುಗಳ ಮಳಿಗೆ, ಗೋಡಂಬಿ ಪ್ರದರ್ಶನ ಇರುತ್ತದೆ ಎಂದು ಮಮತಾ ಗಟ್ಟಿ ವಿವರಿಸಿದರು.
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕಮಲ ಕರಿಕಾಲನ್ ಮಾತನಾಡುತ್ತಾ, ಮನೆಗೊಂದು ಗೇರು ಗಿಡ ಬೆಳೆಸುವ ಯೋಜನೆ ನಿಗಮ ಹಾಕಿಕೊಂಡಿದೆ ಎಂದರು.
ಈ ಸಂದರ್ಭ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಲನ್ ಮೊದಲಾದವರು ಜೊತೆಗಿದ್ದರು.













0 comments:
Post a Comment