ಬಂಟ್ವಾಳ, ಜೂನ್ 10, 2026 (ಕರಾವಳಿ ಟೈಮ್ಸ್) : ಕರ್ತವ್ಯ ನಿಮಿತ್ತ ಬೈಕಿನ ಹಿಂಬದಿಯಲ್ಲಿ ಕುಳಿತು ತೆರಳುತ್ತಿದ್ದ ವೇಳೆ ಹಠಾತ್ ಹೃದಯಾಘಾತಕ್ಕೊಳಗಾಗಿ ಮೆಸ್ಕಾಂ ಉದ್ಯೋಗಿ ಮೃತಪಟ್ಟ ಘಟನೆ ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿ ಜೂನ್ 10 ರಂದು ಸಂಭವಿಸಿದೆ.
ಮೃತ ಮೆಸ್ಕಾಂ ಉದ್ಯೋಗಿಯನ್ನು ಮೂಲತಃ ಮಿತ್ತೂರು ನಿವಾಸಿ, ಪ್ರಸ್ತುತ ನರಿಕೊಂಬು ಗ್ರಾಮದಲ್ಲಿ ವಾಸವಾಗಿರುವ ಚಂದ್ರಶೇಖರ ನಾಯ್ಕ (55) ಎಂದು ಹೆಸರಿಸಲಾಗಿದೆ. ಮೆಸ್ಕಾಂ ಇಲಾಖೆಯ ಪಾಣೆಮಂಗಳೂರು ಶಾಖಾ ಕಚೇರಿಯಲ್ಲಿ ಸಹಾಯಕ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಬುಧವಾರ ಮಧ್ಯಾಹ್ನ ಕೆಲಸದ ನಿಮಿತ್ತ ವ್ಯಕ್ತಿಯೋರ್ವರ ಬೈಕಿನ ಹಿಂಬದಿಯಲ್ಲಿ ಕುಳಿತು ಸಂಚರಿಸುತ್ತಿದ್ದ ವೇಳೆ ಶಂಭೂರು ಗ್ರಾಮದ ಕಂದಾಯಗೋಳಿ ಎಂಬಲ್ಲಿ ಹಠಾತ್ ಆಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬೈಕ್ ಸವಾರ ಹಾಗೂ ಸ್ಥಳೀಯರು ಬಿ ಸಿ ರೋಡಿನ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೃದಯಾಘಾತದಿಂದ ಇವರು ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವೈದ್ಯರು ಶಂಕಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.













0 comments:
Post a Comment