ಬಂಟ್ವಾಳ, ಜುಲೈ 06, 2026 (ಕರಾವಳಿ ಟೈಮ್ಸ್) : ಜಿಲ್ಲಾಡಳಿತ ಇತ್ತೀಚೆಗೆ ಖಡಕ್ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಕೆಲವೇ ದಿನಗಳ ಹಿಂದೆ ಬಿ ಸಿ ರೋಡು ಪೇಟೆಯ ಎಲ್ಲೆಂದರಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಫ್ಲೆಕ್ಸ್ ಗಳನ್ನು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಎತ್ತಂಗಡಿಗೆ ಕ್ರಮ ಕೈಗೊಂಡಿದ್ದಲ್ಲದೆ ಮುಂದಕ್ಕೆ ಬ್ಯಾನರ್ ಅಳವಡಿಸಿದರೆ ಭಾರೀ ದಂಡದ ಜೊತೆಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.
ಆದರೆ ಮುಖ್ಯಾಧಿಕಾರಿಗಳ ಕಾರ್ಯಾಚರಣೆ ನಡೆದು ವಾರಗಳ ಅಂತರದಲ್ಲಿ ಬಿ ಸಿ ರೋಡು ಮುಖ್ಯ ಪೇಟೆಯಲ್ಲಿ ಮತ್ತೆ ಅನಧಿಕೃತ ಹಾಗೂ ಅಪಾಯಕಾರಿ ರೀತಿಯಲ್ಲಿ ಬ್ಯಾನರ್ ಪ್ರತ್ಯಕ್ಷಗೊಂಡಿದೆ. ಬಿ ಸಿ ರೋಡಿನ ಮುಖ್ಯ ಬೀದಿಯಲ್ಲಿ ಇದೀಗ ಬ್ಯಾನರ್ ರಾರಾಜಿಸುತ್ತಿದ್ದು, ಮುಂಗಾರು ಅಬ್ಬರವೂ ಜೋರಾಗಿ ಆರಂಭವಾಗಿದೆ. ನಿತ್ಯವೂ ರಭಸದಿಂದ ಗಾಳಿ ಬೀಸುತ್ತಿದೆ. ಇಲ್ಲಿ ಅಳವಡಿಸಲಾಗಿರುವ ಬ್ಯಾನರುಗಳಿಗೆ ಯಾವುದೇ ರೀತಿಯ ಸುರಕ್ಷತಾ ಕ್ರಮವೂ ಕಂಡು ಬರುವುದಿಲ್ಲ. ಪರಿಣಾಮ ಯಾವುದೇ ಕ್ಷಣದಲ್ಲೂ ಇಲ್ಲಿನ ಬ್ಯಾನರ್ ಅನಾಹುತ ತಂದೊಡ್ಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಜಿಲ್ಲಾಡಳಿತದ ಆದೇಶ ಹಾಗೂ ಮುಖ್ಯಾಧಿಕಾರಿಯವರ ದಂಡ ಪ್ರಯೋಗ ಅನಧಿಕೃತ ಬ್ಯಾನರ್ ಬಗ್ಗೆ ಯಾವಾಗ ಜಾರಿಯಾಗಬಹುದು ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.

















0 comments:
Post a Comment