ಬಂಟ್ವಾಳ, ಜುಲೈ 07, 2026 (ಕರಾವಳಿ ಟೈಮ್ಸ್) : ಜಿಲ್ಲಾಡಳಿತ ಇತ್ತೀಚೆಗೆ ಖಡಕ್ ಆದೇಶ ಹೊರಡಿಸಿದ ಹೊರತಾಗಿಯೂ ಬಿ ಸಿ ರೋಡು ಪೇಟೆಯಲ್ಲಿ ಅನಧಿಕೃತ ಹಾಗೂ ಅಪಾಯಕಾರಿಯಾಗಿ ಅಳವಡಿಸಲಾಗಿದ್ದ ಬ್ಯಾನರುಗಳನ್ನು ಕರಾವಳಿ ಟೈಮ್ಸ್ ವರದಿಯ ಹಿನ್ನಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಅವರು ಮಂಗಳವಾರ ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಬಿ ಸಿ ರೋಡು ಪೇಟೆಯ ಎಲ್ಲೆಂದರಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಫ್ಲೆಕ್ಸ್ ಗಳನ್ನು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಎತ್ತಂಗಡಿಗೆ ಕ್ರಮ ಕೈಗೊಂಡಿದ್ದಲ್ಲದೆ ಮುಂದಕ್ಕೆ ಬ್ಯಾನರ್ ಅಳವಡಿಸಿದರೆ ಭಾರೀ ದಂಡದ ಜೊತೆಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.
ಆದರೂ ಮುಖ್ಯಾಧಿಕಾರಿಗಳ ಕಾರ್ಯಾಚರಣೆ ನಡೆದು ವಾರಗಳ ಅಂತರದಲ್ಲಿ ಬಿ ಸಿ ರೋಡು ಮುಖ್ಯ ಪೇಟೆಯಲ್ಲಿ ಮತ್ತೆ ಅನಧಿಕೃತ ಹಾಗೂ ಅಪಾಯಕಾರಿ ರೀತಿಯಲ್ಲಿ ಬ್ಯಾನರ್ ಪ್ರತ್ಯಕ್ಷಗೊಂತ್ತು. ಬಿ ಸಿ ರೋಡಿನ ಮುಖ್ಯ ಬೀದಿಯಲ್ಲಿ ಜನ ವಾಹನ ಸಂಚಾರ ಇರುವ ಸ್ಥಳಗಳಲ್ಲಿ ಮಳೆ-ಬಿರುಗಾಳಿ ಅಬ್ಬರದ ನಡುವೆ ಸುರಕ್ಷತಾ ಕ್ರಮ ಇಲ್ಲದ ಬ್ಯಾನರುಗಳು ಜನರ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸೋಮವಾರ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ಪತ್ರಿಕಾ ವರದಿಗೆ ತಕ್ಷಣ ಸ್ಪಂದಿಸಿದ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಪುರಸಭಾ ಪೌರ ಕಾರ್ಮಿಕರ ಮೂಲಕ ಬಿ ಸಿ ರೋಡು ಪೇಟೆ ಹಾಗೂ ಮುಖ್ಯ ವೃತ್ತಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಬ್ಯಾನರುಗಳನ್ನು ತೆರವುಗೊಳಿಸಿದ್ದಾರೆ.




















0 comments:
Post a Comment