ಮೈಸೂರು, ಜುಲೈ 11, 2026 (ಕರಾವಳಿ ಟೈಮ್ಸ್) : ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್. ಜಾನಕಿ (88) ಅವರು ಜುಲೈ 11 ರಂದು ಸಂಜೆ ವೇಳೆ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಅವರನ್ನು ಮೈಸೂರಿನ ಅಪೆÇಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎಸ್ ಜಾನಕಿ ಅವರು ಮೈಸೂರಿನಲ್ಲಿ ವಾಸವಿದ್ದರು, ಅವರ ಆರೋಗ್ಯವನ್ನು ನವೀನ್ ಎಂಬ ಕೇರ್ ಟೇಕರ್ ನೋಡಿಕೊಳ್ಳುತ್ತಿದ್ದರು. ಇಂದು ಸಂಜೆ ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಆಗಿದ್ದು, ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಅವರು ಚಿಕಿತ್ಸೆಗೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
1938ರ ಎಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ, ತಮ್ಮ ಮೂರನೆಯ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. 1957ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಜಾನಕಿ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದು ಎಂದು ಹರಿದು ಬರಲು ಪ್ರಾರಂಭವಾದವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಸಿನಿರಸಿಕರನ್ನು ರಂಜಿಸಿದ್ದಾರೆ.
ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದ ಎಸ್ ಜಾನಕಿ ಅವರು ಜೊತೆಗೆ ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯವನ್ನು ಹರಿಸಿದರು. ದೀಪವು ನಿನ್ನದೆ, ಗಾಳಿಯೂ ನಿನ್ನದೆ, ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’, ‘ಯುಗ ಯುಗಾದಿ ಕಳೆದರೂ’, `ಹೇಳೇ ಗೆಳತಿ ಬಾನಲ್ಲು ನೀನೆ ಭುವಿಯಲ್ಲು ನೀನೆ’, `ಬಿಸಿಲಾದರೇನು ಮಳೆಯಾದರೇನು’ ಸೋಲೆ ಇಲ್ಲ, ಅಂತಹ ಅಸಂಖ್ಯಾತ ಸುಮಧುರ ಕನ್ನಡ ಗೀತೆಗಳಿಗೆ ಅವರು ದನಿಯಾಗಿದ್ದಾರೆ.
ಎಸ್. ಜಾನಕಿ ಅವರಿಗೆ ಹಲವು ರಾಷ್ಟ್ರಪ್ರಶಸ್ತಿಗಳು, ವಿವಿಧ ರಾಜ್ಯಗಳ ಪ್ರಶಸ್ತಿಗಳು ಬಂದಿವೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದೆ. ಕನ್ನಡ ಚಿತ್ರರಂಗದಲ್ಲಿ ಎಸ್. ಜಾನಕಿ ಅವರ ಕೊಡುಗೆ ಅತ್ಯಂತ ವಿಶಿಷ್ಟವಾಗಿದೆ. ಜಿ.ಕೆ. ವೆಂಕಟೇಶ್, ಇಳಯರಾಜ, ವಿಜಯಭಾಸ್ಕರ್, ರಾಜನ್-ನಾಗೇಂದ್ರ, ಉಪೇಂದ್ರಕುಮಾರ್, ಹಂಸಲೇಖ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರ ಸಂಗೀತದಲ್ಲಿ ಅವರು ಅಮರ ಗೀತೆಗಳನ್ನು ನೀಡಿದ್ದಾರೆ. ಡಾ. ರಾಜ್ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್ ಸೇರಿದಂತೆ ಹಲವು ದಿಗ್ಗಜ ಗಾಯಕರೊಂದಿಗೆ ಅವರು ಹಾಡಿದ ಹಾಡುಗಳು ಸಂಗೀತಾಸಕ್ತರ ಮೆಚ್ಚುಗೆ ಗಳಿಸಿವೆ.















0 comments:
Post a Comment